Virender Sehwag: ಟೀಮ್ ಇಂಡಿಯಾಗೆ ಈ ಮೂವರು ಯುವ ವೇಗಿಗಳನ್ನು ಆಯ್ಕೆ ಮಾಡಲೇಬೇಕು..!

India vs South Africa: ಐಪಿಎಲ್ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಆತಿಥ್ಯ ವಹಿಸಲಿದೆ. ಸರಣಿಯ ಮೊದಲ ಟಿ20 ಪಂದ್ಯ ಜೂನ್ 9 ರಂದು ನಡೆಯಲಿದೆ.

Virender Sehwag: ಟೀಮ್ ಇಂಡಿಯಾಗೆ ಈ ಮೂವರು ಯುವ ವೇಗಿಗಳನ್ನು ಆಯ್ಕೆ ಮಾಡಲೇಬೇಕು..!
Virender Sehwag
Updated By: ಝಾಹಿರ್ ಯೂಸುಫ್

Updated on: May 01, 2022 | 4:15 PM

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2022) ಅನೇಕ ಯುವ ಭಾರತೀಯ ಬೌಲರ್‌ಗಳು ತಮ್ಮ ಅದ್ಭುತ ಬೌಲಿಂಗ್‌ನಿಂದ ಗಮನ ಸೆಳೆದಿದ್ದಾರೆ. ಇವರಲ್ಲಿ ಯುವ ವೇಗಿ ಉಮ್ರಾನ್ ಮಲಿಕ್ (Umran Malik) ಅಗ್ರಸ್ಥಾನದಲ್ಲಿದ್ದಾರೆ. ಎಸ್​ಆರ್​ಹೆಚ್ (SRH)​ ಪರ ಆಡುತ್ತಿರುವ ಜಮ್ಮು-ಕಾಶ್ಮೀರದ ಯುವ ವೇಗದ ಅಸ್ತ್ರ ಪ್ರಮುಖ ಆಟಗಾರರನ್ನೇ ತನ್ನ ವೇಗದಿಂದಲೇ ಕಂಗೆಡಿಸಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡುತ್ತಿರುವ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೂಡ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿಯೇ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಬೌಲರ್​ಗಳಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ನೀಡಬೇಕೆಂದು ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ಜೊತೆಗೆ ಅವೇಶ್ ಖಾನ್ ಅವರನ್ನು ಟೀಮ್​ ಇಂಡಿಯಾಗೆ ಆಯ್ಕೆ ಮಾಡಬೇಕು ಎಂದು ಅನುಭವಿ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೇಳೆ ಪ್ರಮುಖ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡುವುದು ಉತ್ತಮ ಎಂದು ಸಲಹೆ ನೀಡಿರುವ ಸೆಹ್ವಾಗ್, ಅವರ ಬದಲಿಗೆ ಅದ್ಭುತ ಫಾರ್ಮ್​ನಲ್ಲಿರುವ ಈ ವೇಗಿಗಳನ್ನು ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ.

ಏಕೆಂದರೆ ಮುಂಬರುವ ಟೀಮ್ ಇಂಡಿಯಾದ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದೆ. ಹೀಗಾಗಿ ತಂಡದಲ್ಲಿರುವ ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ ನೀಡುವ ಮೂಲಕ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಬೇಕೆಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಎಲ್ಲರೂ ಟಿ20 ವಿಶ್ವಕಪ್​ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನನ್ನ ಪ್ರಕಾರ ಯುವ ಬೌಲರ್​ಗಳಿಗೆ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ವೇಳೆಯೇ ಅವಕಾಶ ಸಿಗಬೇಕೆಂದು ನಾನು ಬಯಸುತ್ತೇನೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಈಗಾಗಲೇ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಈ ಬೌಲರ್​ಗಳು ಅಂತರರಾಷ್ಟ್ರೀಯ ತಂಡದ ವಿರುದ್ಧ ಅವರು ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದರ ಸ್ಪಷ್ಟತೆ ಸಿಗಲಿದೆ. ಅಲ್ಲದೆ ಅವರು ಸಹ ಸ್ವಲ್ಪ ಅನುಭವವನ್ನೂ ಪಡೆಯುತ್ತಾರೆ. ಹೀಗಾಗಿ ನನ್ನ ಪ್ರಕಾರ ಉಮ್ರಾನ್ ಮಲಿಕ್, ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್​ಗೆ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಅವಕಾಶ ನೀಡಲೇಬೇಕು ಎಂದು ಸೆಹ್ವಾಗ್ ತಿಳಿಸಿದ್ದಾರೆ.

ಐಪಿಎಲ್ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಆತಿಥ್ಯ ವಹಿಸಲಿದೆ. ಸರಣಿಯ ಮೊದಲ ಟಿ20 ಪಂದ್ಯ ಜೂನ್ 9 ರಂದು ನಡೆಯಲಿದೆ. ಈ ಸರಣಿಯಲ್ಲಿ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ತಂಡಕ್ಕೆ ಸೇರ್ಪಡೆಯಾಗಬೇಕು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಉಮ್ರಾನ್ ಮಲಿಕ್ ಈ ಸೀಸನ್​ನಲ್ಲಿ ಇದುವರೆಗೆ 15 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಅರ್ಷದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ತಮ್ಮ ಬೌಲಿಂಗ್ ಎಕಾನಮಿಯೊಂದಿಗೆ ಛಾಪು ಮೂಡಿಸಿದ್ದಾರೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ಅವೇಶ್ ಖಾನ್ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ಸರಣಿಗೆ ಈ ಮೂವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಬೇಕೆಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.