ಫೈನಲ್​ ಆಡುವುದು ನಾವು, ನಿಮ್ಮ ಕುಟುಂಬದವರಿಗ್ಯಾಕೆ ಟಿಕೆಟ್?​ ಕುಚೇಷ್ಟೆ ಮಾಡಿದ್ದ ಅಖ್ತರ್​ಗೆ, ಬಜ್ಜಿ ನೀಡಿದ್ರು ಮಾತಿನ ಚಡಿ ಏಟು!

ಹರ್ಭಜನ್​ ಸಿಂಗ್​ಗೆ ಕರೆ ಮಾಡಿದ್ದ ಪಾಕಿಸ್ತಾನದ ವೇಗದ ಬೌಲರ್​ ಶೋಯೆಬ್ ಅಖ್ತರ್​, ತಮ್ಮ ಕುಟುಂಬ ಸದಸ್ಯರಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಲು 4 ಟಿಕೆಟ್​ ಕೊಡಿಸುವಂತೆ ಕೇಳಿಕೊಂಡಿದ್ದರು

ಫೈನಲ್​ ಆಡುವುದು ನಾವು, ನಿಮ್ಮ ಕುಟುಂಬದವರಿಗ್ಯಾಕೆ ಟಿಕೆಟ್?​ ಕುಚೇಷ್ಟೆ ಮಾಡಿದ್ದ ಅಖ್ತರ್​ಗೆ, ಬಜ್ಜಿ ನೀಡಿದ್ರು ಮಾತಿನ ಚಡಿ ಏಟು!
ಹರ್ಭಜನ್ ಸಿಂಗ್, ಪಾಕಿಸ್ತಾನ ವೇಗಿ ಶೋಯೆಬ್ ಅಖ್ತರ್

Updated on: Apr 03, 2021 | 5:57 PM

ಭಾರತದ 2011 ರ ವಿಶ್ವಕಪ್ ಗೆಲುವನ್ನು ಕ್ರಿಕೆಟ್ ಅಭಿಮಾನಿಗಳು ಇನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಎಂ.ಎಸ್.ಧೋನಿ ನೇತೃತ್ವದಲ್ಲಿ ಭಾರತವು ಶ್ರೀಲಂಕಾವನ್ನು ಸೋಲಿಸಿ 28 ವರ್ಷಗಳ ಅಂತರದ ನಂತರ ವಿಶ್ವಕಪ್ ಎತ್ತುವಂತೆ ಮಾಡಿತು. ಸ್ವದೇಶದಲ್ಲಿ ಪಂದ್ಯಾವಳಿಯನ್ನು ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು. ಫೈನಲ್‌ನ 49 ನೇ ಓವರ್‌ನಲ್ಲಿ ಧೋನಿ ಅವರ ನುವಾನ್ ಕುಲಶೇಖರ ಅವರ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿದ್ದರು.

ಶ್ರೀಲಂಕಾವನ್ನು ಎದುರಿಸುವ ಮೊದಲು ಭಾರತ 2011 ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. ಈ ದಾಯಾದಿ ಕಲಹವನ್ನು ವೀಕ್ಷಿಸಲು ಇಡೀ ವಿಶ್ವವೇ ಕಾದುಕುಳಿತಿತ್ತು. ಒಂದರ್ಥದಲ್ಲಿ ಟೀಂ ಇಂಡಿಯಾಕ್ಕೆ ಇದೇ ಫೈನಲ್​ ಪಂದ್ಯದ ರೀತಿ ಗೋಚರಿಸಿತ್ತು. ಅದಕ್ಕೆ ಕಾರಣವೂ ಸಾವಿರಾರಿದೆ. ಕ್ರಿಕೆಟ್​ ಭಾರತದಲ್ಲಿ ಆರಂಭವಾಗಿನಿಂದಲೂ ಭಾರತೀಯರಿಗೆ ಇಂಡಿಯಾ ಪಾಕಿಸ್ತಾನ ಪಂದ್ಯವೆಂದರೆ ಅದೊಂದು ಮಿನಿ ಯುದ್ದದಂತೆಯೇ ಬಾಸವಾಗುತ್ತದೆ. ಹೀಗಾಇ ಅಂದಿನ ಪಂದ್ಯವನ್ನು ಭಾರತ ಗೆಲ್ಲಲೇಬೇಕಾಗಿತ್ತು. ನಿರೀಕ್ಷೆಯಂತೆ ಆ ಪಂದ್ಯವನ್ನು ಭಾರತ ಗೆದ್ದು ಫೈನಲ್​ಗೆ ಟಿಕೆಟ್​ ಖಾತ್ರಿ ಪಡಿಸಿಕೊಂಡಿತ್ತು.

ವಿಶ್ವಕಪ್​ ಗೆದ್ದು 10 ವರ್ಷಗಳಾಯಿತು
ಭಾರತ ವಿಶ್ವಕಪ್​ ಗೆದ್ದು ಬರೋಬ್ಬರಿ 10 ವರ್ಷಗಳು ಕಳೆದಿವೆ. ಆದರೂ ಭಾರತೀಯರಿಗೆ ಮಾತ್ರ ಅದು ನೆನ್ನೆ ನೆನ್ನೆಯಷ್ಟೆ ನಡೆದಂತಿದೆ. ಏಪ್ರಿಲ್​ 3ಕ್ಕೆ ಭಾರತ ವಿಶ್ವಕಪ್​ ಗೆದ್ದು 10 ವರ್ಷಗಳಾಯಿತು. ಇದರ ಪ್ರಯುಕ್ತ ಮಾತಾನಾಡಿದ ಟೀಂ ಇಂಡಿಯಾದ ಅಂದಿನ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್, ಪಾಕಿಸ್ತಾನ ವೇಗಿ ಶೋಯೆಬ್ ಅಖ್ತರ್ ಹಾಗೂ ತಮ್ಮ ನಡುವೆ ನಡೆದಿದ್ದ ಒಂದು ಕುತೂಹಲಕಾರಿ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.

4 ಟಿಕೆಟ್​ ಕೊಡಿಸುವಂತೆ ಕೇಳಿಕೊಂಡಿದ್ದರು
ಈ ಘಟನೆ ನಡೆದಿದ್ದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಸೆಮಿಫೈನಲ್​ ಪಂದ್ಯಕ್ಕೂ ಒಂದು ದಿನ ಮುಂಚೆ. ಪಂದ್ಯದ ಹಿಂದಿನ ದಿನ ಹರ್ಭಜನ್​ ಸಿಂಗ್​ಗೆ ಕರೆ ಮಾಡಿದ್ದ ಪಾಕಿಸ್ತಾನದ ವೇಗದ ಬೌಲರ್​ ಶೋಯೆಬ್ ಅಖ್ತರ್​, ತಮ್ಮ ಕುಟುಂಬ ಸದಸ್ಯರಿಗೆ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಲು 4 ಟಿಕೆಟ್​ ಕೊಡಿಸುವಂತೆ ಕೇಳಿಕೊಂಡಿದ್ದರು. ಇದನ್ನು ಆತ್ಮೀಯತೆಯಿಂದ ಒಪ್ಪಿಕೊಂಡಿದ್ದ ಹರ್ಭಜನ್​ ಸಿಂಗ್​ ಪಂಜಾಬ್​ ಕ್ರಿಕೆಟ್​ ಬೋರ್ಡ್​ ಜೊತೆ ಮಾತಾನಾಡಿ 4 ಟಿಕೆಟ್​ ಪಡೆದುಕೊಂಡರು. ಆ ಟಿಕೆಟ್​ಗಳನ್ನು ಅಖ್ತರ್​ಗೆ ನೀಡಲು ಹರ್ಭಜನ್​ ತೆರಳಿದ್ದರು.

ಈ ವೇಳೆ ಹರ್ಭಜನ್​ ಬಳಿ ಟಿಕೆಟ್​ ಪಡೆದುಕೊಂಡ ಅಖ್ತರ್​, ಟಿಕೆಟ್​ ಕೊಡಿಸಿದ್ದಕ್ಕೆ ಧನ್ಯವಾದಗಳು. ಇದೇ ರೀತಿ ಫೈನಲ್​ ಪಂದ್ಯಕ್ಕೂ 4 ಟಿಕೆಟ್​ ಕೊಡಿಸಿ ಎಂದು ಕೇಳಿಕೊಂಡರಂತೆ. (ಇದರರ್ಥ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾವನ್ನು ಪಾಕಿಸ್ತಾನ ಸೋಲಿಸಿ ಫೈನಲ್​ಗೆ ಪ್ರವೇಶಿಸಲಿದೆ ಎಂಬುದಾಗಿತ್ತು) ಅಖ್ತರ್​ ಅವರ ಕುಚ್ಚೇಷ್ಟೆಯ ಮಾತುಗಳನ್ನು ಕೇಳಿದ ಹರ್ಭಜನ್​ ಉತ್ತರಿಸಿದ್ದು ಹೀಗೆ. ಫೈನಲ್​ನಲ್ಲಿ ಆಡುವುದು ಭಾರತ. ಹಾಗಾಗಿ ನಿಮ್ಮ ಕುಟುಂಬದವರು ಅಲ್ಲಿಗೆ ಬಂದು ಏನು ಮಾಡುತ್ತಾರೆ. ಬೇಕಿದ್ದರೆ ನೀವು ಬರುವುದಿದ್ದರೆ ಹೇಳಿ ನಿಮಗೂ ಸೇರಿಸಿ ಟಿಕೆಟ್​ ಕೊಡಿಸುತ್ತೇನೆ ಎಂದು ತಿರುಗೇಟು ನೀಡಿದರಂತೆ.

ಇದನ್ನೂ ಓದಿ:ಸಚಿನ್ ಎಂದಿಗೂ ನಿಮ್ಮನ್ನು​ ಪ್ರಬಲ ಎದುರಾಳಿ ಎಂದು ಪರಿಗಣಿಸಲಿಲ್ಲ.. ಸಖತ್​ ಟ್ರೋಲ್​ ಆಗ್ತಿದೆ ಶೋಯೆಬ್ ಅಖ್ತರ್ ಟ್ವಿಟರ್​ ಪೋಸ್ಟ್​!

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us