India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ
ವಿರಾಟ್​ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ

Updated on: Mar 11, 2021 | 4:00 PM

ಅಹಮದಾಬಾದ್: ನಾಳೆಯಿಂದ ಅಂದರೆ ಶುಕ್ರವಾರದಿಂದ ಟಿ20 ಕ್ರಿಕೆಟ್ ರಸದೌತಣ ಶುರುವಾಗಲಿದೆ. ಭಾರತ ಮತ್ತ್ತು ಇಂಗ್ಲೆಂಡ್ ನಡುವಿನ 5-ಪಂದ್ಯಗಳ ಟಿ20 ಸರಣಿ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿದ್ದು ಎಲ್ಲ 5 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಪ್ರವಾಸಿ ತಂಡವನ್ನು ಟೆಸ್ಟ್​ ಸರಣಿಯಲ್ಲಿ 3-1ಅಂತರದಿಂದ ಸುಲಭವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ. ಅದೇ ವಿಶ್ವಾಸದೊಂದಿಗೆ ಸೀಮಿತ ಓವರ್​ಗಳ ಸರಣಿಗಳನ್ನಾಡಲು ಸನ್ನದ್ಧವಾಗಿದೆ. ಚುಟುಕು ಆವೃತ್ತಿಗೆ ಸ್ಪೆಷಲಿಸ್ಟ್​ಗಳಾಗಿರುವ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಶಿಖರ್ ಧವನ್ ತಂಡಕ್ಕೆ ಆರಿಸಲಾಗಿದ್ದು ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹಾತೆರೊಯುತ್ತಿದ್ದಾರೆ.

ಫಾರ್ಮಾಟ್​ ಬದಲಾದರೂ ತನ್ನ ತಂಡದ ಮಿಷನ್ ಬದಲಾಗಿಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ಅವರು, ‘ಹೊಸ ವಾರ, ಹೊಸ ಫಾರ್ಮಾಟ್ ಆದರೆ ಮಿಷನ್ ಅದೇ, ಅದನ್ನು ಸಾಧಿಸುವ,’ ಅಂತ ಹೇಳಿದ್ದಾರೆ.

ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಜೂನ್​ನಲ್ಲಿ ನಡೆಯುವ ವಿಸ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಅರ್ಹತೆ ಗಿಟ್ಟಿಸಿದ್ದ್ದು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್​ ತಂಡವನ್ನು ಅದು ಬ್ರಿಟನ್ನಿನ ಸೌಥಾಂಪ್ಟನ್​ನಲ್ಲಿ ಎದುರಿಸಲಿದೆ.

ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಆಡುವ ಇಲೆವೆನ್​ನಲ್ಲಿ ಸೂರ್ಯಕುಮಾರ್​ಗೆ ಸ್ಥಾನ ಸಿಗೋದು ಸಾಧ್ಯವಾಗದೆ ಹೋಗಬಹುದು. ಮುಂಬೈ ಇಂಡಿಯನ್ಸ್ ಟೀಮಿಗೆ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ, ಟೀಮ್ ಇಂಡಿಯಾಗೆ ಅದೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಡುತ್ತಾರೆ. ಯಾದವ್​ಗೆ ಸ್ಥಾನ ಸಿಗಬೇಕಾದರೆ ಅಯ್ಯರ್​ನನ್ನು ಹೊರಗಡೆ ಕೂರಿಸಬೇಕಾಗುತ್ತದೆ. ಟೀಮ್ ಮ್ಯಾನೇಜ್ಮೆಂಟ್ ಹಾಗೆ ಮಾಡುವ ಸಾಧ್ಯತೆ ತೀರಾ ಕಡಿಮೆ.

ಯಾದವ್​ ಅವರಂತೆ ಕಿಷನ್ ಸಹ ಚೆಂಡನ್ನು ಮನಬಂದಂತೆ ದಂಡಿಸಬಲ್ಲರು. ಆದರೆ ಅಯ್ಯರ್ ಅವರಿಗೆ ಅನುಭವದ ನೆರವಿದೆ. ಅಲ್ಲದೆ ಟೀಮಿಗೆ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ವಾಪಸ್ಸಾಗಿರುವುದರಿಂದ ಬೇರೆ ಪವರ್-ಹಿಟ್ಟರ್​ಗಳ ಅವಶ್ಯಕತೆ ಬೀಳಲಾರದು.

ಎಲ್ಲ ಆವೃತ್ತಿಗಳಲ್ಲೂ ಭಾರತದ ಪ್ರಿಮೀಯರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಮದುವೆ ತಯಾರಿಯ ಹಿನ್ನೆಲೆಯಲ್ಲಿ ರಜೆ ಮೇಲಿರುವುದರಿಂದ ಅವರ ಸ್ಥಾನದಲ್ಲಿ, ಭುವನೇಶ್ವರ್ ಕುಮಾರ್ ಆಡವುದು ನಿಶ್ಚಿತ. ಭುವಿ ಸಹ ನಿಖರವಾದ ಯಾರ್ಕರ್​ಗಳನ್ನು ಎಸೆಯಬಲ್ಲರು. ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಆಡುವ ಅವರು ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದರು. ಸ್ಪಿನ್ನರ್​ಗಳ ಪೈಕಿ ಸೀಮಿತ ಓವರ್​ಗಳ ಪರಿಣಿತ ಎನಿಸಿಕೊಂಡಿರುರವ ಚಹಲ್ ನಾಳೆ ಆಡುವುದರಲ್ಲಿ ಸಂದೇಹವಿಲ್ಲ.

ಅದರೆ ಎರಡನೇ ಸ್ಪಿನ್ನರ್​ ಸ್ಥಾನಕ್ಕೆ ಸ್ಪರ್ಧೆ ಜೋರಾಗಿದ್ದು ಮೂವರು ದಾವೇದಾರರು ಕಣದಲ್ಲಿದ್ದಾರೆ-ವಾಷಿಂಗ್ಡನ್ ಸುಂದರ್, ಅಕ್ಷರ್ ಪಟೇಲ್ ಮತ್ತು ರಾಹುಲ್ ತೆವಾಟಿಯಾ. ಟೆಸ್ಟ್ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅಕ್ಷರ್​ ಅವರನ್ನು ಆಡುವ ಇಲೆವೆನ್​ನಲ್ಲಿ ಸೇರಿಸಿದರೆ ಅಚ್ಚರಿಯಿಲ್ಲ.

ಟಿ20 ಸರಣಿಗೆ ಭಾರತದ ಟೀಮ್ ಇಂತಿದೆ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ-ನಾಯಕ), ಕೆ ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಷನ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ಆಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್

ಇದನ್ನೂ ಓದಿ: India vs England | ಡೇವಿಡ್ ಮಲಾನ್: ಟಿ-20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಚಾಂಪಿಯನ್ ಬ್ಯಾಟ್ಸ್​ಮನ್!

Published On - 4:00 pm, Thu, 11 March 21

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us