AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್-13: ಎಂದಿನ ಒನಪು, ವೈಯಾರ ಮತ್ತು ಪ್ರೇಕ್ಷಕರಿಲ್ಲದ ಅವೃತಿ

ಒಲಂಪಿಕ್ಸ್ ಸೇರಿದಂತೆ ಹಲವಾರು ಬೃಹತ್ ಪ್ರಮಾಣದ ಕ್ರೀಡಾಕೂಟಗಳು ರದ್ದಾಗಿರುವ ಇಲ್ಲವೇ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಇಂದಿನಿಂದ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ 13 ನೇ ಆವೃತಿಯು ಕ್ರೀಡಾಸಕ್ತರಲ್ಲಿ ನಿಸ್ಸಂದೆಹವಾಗಿ ರೋಮಾಂಚನವನ್ನುಂಟು ಮಾಡಿದೆ. ಮಾರ್ಚ್್​ನಲ್ಲಿ ಶುರುವಾಗಬೇಕಿದ್ದ ಪ್ರಾಯಶಃ ಕ್ರಿಕೆಟ್​ನ ಅತಿ ದೊಡ್ಡ ಮನರಂಜನಾತ್ಮಕ ಈವೆಂಟ್ ಕೊವಿಡ್-19 ಪಿಡುಗಿನಿಂದಾಗಿ ಮುಂದೂಡಲ್ಪಟ್ಟಿದ್ದೂ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಯುಎಈಗೆ ಸ್ಥಳಾಂತರಿಸಲಾಯಿತು. ನಾವೀಗಾಗಲೇ ಚರ್ಚಿಸಿರುವಂತೆ ಈ ಸಲದ ಐಪಿಎಲ್ ಪಂದ್ಯಗಳು ಖಾಲಿ ಮೈದಾನದಲ್ಲಿ ಮತ್ತು ಟೂರ್ನಿಯ ಗ್ಲಾಮರ್ ಭಾಗವಾಗಿದ್ದ ಚೀರ್ ಲೀಡರ್​ಗಳ […]

ಐಪಿಎಲ್-13: ಎಂದಿನ ಒನಪು, ವೈಯಾರ ಮತ್ತು ಪ್ರೇಕ್ಷಕರಿಲ್ಲದ ಅವೃತಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Sep 19, 2020 | 6:37 PM

Share

ಒಲಂಪಿಕ್ಸ್ ಸೇರಿದಂತೆ ಹಲವಾರು ಬೃಹತ್ ಪ್ರಮಾಣದ ಕ್ರೀಡಾಕೂಟಗಳು ರದ್ದಾಗಿರುವ ಇಲ್ಲವೇ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಇಂದಿನಿಂದ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ 13 ನೇ ಆವೃತಿಯು ಕ್ರೀಡಾಸಕ್ತರಲ್ಲಿ ನಿಸ್ಸಂದೆಹವಾಗಿ ರೋಮಾಂಚನವನ್ನುಂಟು ಮಾಡಿದೆ. ಮಾರ್ಚ್್​ನಲ್ಲಿ ಶುರುವಾಗಬೇಕಿದ್ದ ಪ್ರಾಯಶಃ ಕ್ರಿಕೆಟ್​ನ ಅತಿ ದೊಡ್ಡ ಮನರಂಜನಾತ್ಮಕ ಈವೆಂಟ್ ಕೊವಿಡ್-19 ಪಿಡುಗಿನಿಂದಾಗಿ ಮುಂದೂಡಲ್ಪಟ್ಟಿದ್ದೂ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಯುಎಈಗೆ ಸ್ಥಳಾಂತರಿಸಲಾಯಿತು.

ನಾವೀಗಾಗಲೇ ಚರ್ಚಿಸಿರುವಂತೆ ಈ ಸಲದ ಐಪಿಎಲ್ ಪಂದ್ಯಗಳು ಖಾಲಿ ಮೈದಾನದಲ್ಲಿ ಮತ್ತು ಟೂರ್ನಿಯ ಗ್ಲಾಮರ್ ಭಾಗವಾಗಿದ್ದ ಚೀರ್ ಲೀಡರ್​ಗಳ ಅನುಪಸ್ಥಿತಿಯಲ್ಲಿ ನಡೆಯಲಿವೆ. ಕಳೆದೆಲ್ಲ ಟೂರ್ನಮೆಂಟ್​ಗಳಲ್ಲಾದಂತೆ ವಿಜೃಂಭಣೆಯ ಉದ್ಘಾಟನಾ ಸಮಾರಂಭವೂ ಇರುವುದಿಲ್ಲ. ಪ್ಯಾಂಡೆಮಿಕ್​ನ ಹರಡುವಿಕೆಯನ್ನು ತಡೆಯಲು ಈ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಆದರೆ, ಟೂರ್ನಿಯನ್ನು ಆಯೋಜಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಂಡಂತಿಲ್ಲ. ಶಾರ್ಜಾದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘‘ಮೈದಾನಗಳಿಗೆ ಹೋಗಿ ಪಂದ್ಯಗಳನ್ನು ನೋಡುವುದು ಸಾಧ್ಯವಾಗದಿದ್ದರೆ ಜನ ಮನೆಗಳಲ್ಲಿ ಕೂತು ಟಿವಿ ಪರದೆಗಳ ಮೇಲೆ ಅದನ್ನು ವೀಕ್ಷಿಸುತ್ತಾರೆ. ಇದರಿಂದ ಬ್ರಾಡ್​ಕಾಸ್ಟರ್​ಗಳ ರೇಟಿಂಗ್ ಮುಗಿಲು ಮುಟ್ಟುತ್ತದೆ. ಟಿವಿ ವಿವರ್​ಶಿಪ್ ಈ ಸಲ ಹೊಸ ದಾಖಲೆ ನಿರ್ಮಿಸಲಿದೆ,’’ ಎಂದು ಹೇಳಿದರು.

ಆದರೆ ಟೂರ್ನಮೆಂಟ್ ಸಾಗುತ್ತಾ ಹೋದಂತೆ ಕ್ರಮೇಣವಾಗಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಅಂದರೆ ಕ್ರೀಡಾಂಗಣ ಸಾಮರ್ಥ್ಯದ ಶೇಕಡಾ 30 ರಷ್ಟು ವೀಕ್ಷಕರನ್ನು ಪಂದ್ಯ ನೋಡಲು ಅವಕಾಶ ಮಾಡಿಕೊಡಬಹುದಾದ ಸಾಧ್ಯತೆ ಇದೆ. ಮೈದಾನದೊಳಗೆ ಪ್ರವೇಶಿಸುವ ಮೊದಲು ಅವರನ್ನು ಕೊವಿಡ್ ಪರೀಕ್ಷಣೆಗೆ ಒಳಪಡಿಸಲಾಗುತ್ತದೆ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತದೆ ಅಂತ ಗಂಗೂಲಿ ಹೇಳಿದರು.

ಐಪಿಎಲ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಮಾತಾಡಿರುವ ರಾಜಸ್ತಾನ ರಾಯಲ್ಸ್ ಟೀಮಿಗೆ ಆಡುವ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ, ‘‘ನಾಲ್ಕಾರು ತಿಂಗಳ ಕಾಲ ಮುಂದೂಡಲ್ಪಟ್ಟು ಈಗ ಆರಂಭವಾಗುತ್ತಿರುವ ಟೂರ್ನಿಯು ಕ್ರಿಕೆಟ್ ಪ್ರೇಮಿಗಳಲ್ಲಿ ನವೋಲ್ಲಾಸ ಮೂಡಿಸಿದೆ, ಮಾನವಕುಲ ಏನೆಲ್ಲ ಅನುಭವಿಸಬೇಕಾಗಿ ಬಂದ ಈ ವರ್ಷ ನಿಜಕ್ಕೂ ವಿಶೇಷವಾಗಿದೆ. ಇದು ನಮಗೆಲ್ಲ ಅನಿಶ್ಚಿತತೆಯ ಸಮಯ, ಕ್ರೀಡಾಪಟುಗಳಾಗಿ ನಾವು ಪರಿಸ್ಥಿತಿ ಸಾಮಾನ್ಯಗೊಳ್ಳುವುದನ್ನು ಎದುರು ನೋಡುತ್ತಿದ್ದೆವು. ಈ ಟೂರ್ನಮೆಂಟ್ ಅಂಥ ಅವಕಾಶವನ್ನು ನಮ್ಮೆಲ್ಲರಿಗೆ ಒದಗಿಸುತ್ತಿದೆ.’’ ಎಂದಿದ್ದಾರೆ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.