RCB ಅಂದ್ರೆನೇ ಥ್ರಿಲ್ಲರ್… ಪಂದ್ಯದ ಬಳಿಕ ಸ್ಮೃತಿ ಮಂಧಾನ ಹೇಳಿದ್ದೇನು?

WPL 2026, RCB vs MI: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​​ಗಳಲ್ಲಿ 154 ರನ್​ ಕಲೆಹಾಕಿದರೆ, ಆರ್​ಸಿಬಿ 20 ಓವರ್​​ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್​​​ಗಳ ರೋಚಕ ಜಯ ಸಾಧಿಸಿದೆ.

RCB ಅಂದ್ರೆನೇ ಥ್ರಿಲ್ಲರ್... ಪಂದ್ಯದ ಬಳಿಕ ಸ್ಮೃತಿ ಮಂಧಾನ ಹೇಳಿದ್ದೇನು?
Smriti Mandhana

Updated on: Jan 10, 2026 | 9:31 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಸೀಸನ್​ನ ಮೊದಲ ಪಂದ್ಯವೇ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ರೋಚಕ ಹೋರಾಟದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. 155 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ತಂಡಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 18 ರನ್​ಗಳ ಅವಶ್ಯಕತೆಯಿತ್ತು. ನಾಟ್ ಸ್ಕೀವರ್ ಬ್ರಂಟ್ ಎಸೆದ ಅಂತಿಮ ಓವರ್​ನಲ್ಲಿ 6,4,6,4 ಬಾರಿಸುವ ಮೂಲಕ ನಡಿನ್ ಡಿ ಕ್ಲರ್ಕ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟರು.

ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ, ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯವೇ ರೋಮಾಂಚಕರಿಯಾಗಿತ್ತು. ಈ ರೋಚಕ ಪಂದ್ಯದಲ್ಲಿ ಗೆದ್ದಿರುವುದು ಖುಷಿ ನೀಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆನೇ ಥ್ರಿಲ್ಲರ್. ಆರ್​ಸಿಬಿ ತಂಡ ರೋಚಕ ಪಂದ್ಯಗಳಿಗೆ ಹೆಸರುವಾಸಿ. ಇದೀಗ ರೋಚಕವಾಗಿ ಪಂದ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ತುಂಬಾ ಸಂತೋಷವಾಯಿತು.

ಈ ಪಂದ್ಯದ ಗೆಲುವಿನ ಶ್ರೇಯಸ್ಸು ನಡಿನ್ ಡಿ ಕ್ಲರ್ಕ್​ಗೆ ಸಲ್ಲಬೇಕು. ಏಕೆಂದರೆ ಅವರು ಅದ್ಭುತವಾಗಿ ಆಡಿದರು. ಹಾಗೆಯೇ ಉಳಿದ ಆಟಗಾರ್ತಿಯರೂ ಕೂಡ ಈ ಪಂದ್ಯದಲ್ಲಿ ಸಾಕಷ್ಟು ಸಕಾರಾತ್ಮಕವಾಗಿದ್ದರು. ಈ ಪಾಸಿಟಿವ್ ಗೆಲುವು – ಸೋಲುಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಈ ಸಕರಾತ್ಮಕತೆಯ ನಡುವೆ ನಡಿನ್ ಡಿ ಕ್ಲರ್ಕ್ ಪ್ರದರ್ಶನ ಅದ್ಭುತ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ನಮಗಾಗಿ ಎಲ್ಲಾ ಜವಾಬ್ದಾರಿ ನಿಭಾಯಿಸಿದರು. ಇದಕ್ಕೂ ಮುನ್ನ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಅವರು ಟೀಮ್ ಇಂಡಿಯಾ ವಿರುದ್ಧ ಆಡಿದ ಇನಿಂಗ್ಸ್ ನಾವು ನೋಡಿದ್ದೇವೆ.  ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೂಡ ಅಂತಹದ್ದೇ ಇನಿಂಗ್ಸ್ ಆಡಿದ್ದಾರೆ.

ಇದನ್ನೂ ಓದಿ: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ನಡಿನ್ ಡಿ ಕ್ಲರ್ಕ್​

ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲೇ ಜಯ ಸಾಧಿಸಿರುವುದು ಖುಷಿ ನೀಡಿದೆ. ಈ ಪಾಸಿಟಿವ್ ವೈಬ್ ಮುಂದಿನ ಪಂದ್ಯಗಳಲ್ಲೂ ಮುಂದುವರೆಯುವ ನಿರೀಕ್ಷೆಯಿದೆ ಎಂದು ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ.