ಮೈಸೂರು ಕಾಡಂಚಿನಲ್ಲಿ 20 ಹುಲಿಗಳ ಓಡಾಟ: ಸಾರ್ವಜನಿಕರಿಗೆ ಡಿಸಿಎಫ್ ಕೊಟ್ಟ ಸಲಹೆ ಸೂಚನೆ ಏನು ನೋಡಿ
ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ನಡುವೆ, ಡಿಸಿಎಫ್ ಪರಮೇಶ್ ಐದು ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಹುಲಿಗಳನ್ನು ನರಹಂತಕ ಎಂದು ಕರೆಯುವುದು ವೈಜ್ಞಾನಿಕವಾಗಿ ತಪ್ಪು ಎಂದ ಅವರು, ಹುಲಿಗಳು ಕಾಡಂಚಿಗೆ ಬರಲು ಗಾಯ, ಸಂತಾನೋತ್ಪತ್ತಿ ಅಥವಾ ಮಾನವ ಹಸ್ತಕ್ಷೇಪ ಕಾರಣ ಎಂದು ವಿವರಿಸಿದ್ದಾರೆ. ಅರಣ್ಯ ಇಲಾಖೆ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಮೈಸೂರು, ನವೆಂಬರ್ 15: ಮೈಸೂರು ಜಿಲ್ಲೆಯಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಇದುವರೆಗೆ 30ಕ್ಕೂ ಹೆಚ್ಚು ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿವೆ. ಮೂವರು ಮನುಷ್ಯರು ಸಾವನ್ನಪ್ಪಿದ್ದಾರೆ. ಈ ಪರಿಸ್ಥಿತಿಯ ಕುರಿತು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪರಮೇಶ್ ಅವರು ಮಾತನಾಡಿ, ಈವರೆಗೆ ಐದು ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಹುಲಿಗಳು ಕಾಡಿನಿಂದ ಹೊರಬರಲು ಮಾನವ ಹಸ್ತಕ್ಷೇಪ, ಸಂತಾನೋತ್ಪತ್ತಿ ಅವಧಿ, ಗಾಯಗಳು ಅಥವಾ ಪ್ರಾದೇಶಿಕ ಕಲಹಗಳೇ ಪ್ರಮುಖ ಕಾರಣ ಎಂದು ಡಿಸಿಎಫ್ ವಿವರಿಸಿದರು. ಹುಲಿಗಳನ್ನು ನರಹಂತಕ ಎಂದು ಕರೆಯುವುದು ತಪ್ಪು. ಯಾವುದೇ ಪ್ರಾಣಿ ಉದ್ದೇಶಪೂರ್ವಕವಾಗಿ ನರಭಕ್ಷಕವಲ್ಲ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ ಎಂದರು. ಅರಣ್ಯ ಇಲಾಖೆಯು NTCA ಮಾರ್ಗಸೂಚಿಗಳ ಅಡಿಯಲ್ಲಿ ಕ್ಯಾಮೆರಾ ಟ್ರ್ಯಾಪ್ಗಳು, ಸಾಕಾನೆಗಳು ಮತ್ತು ಥರ್ಮಲ್ ಡ್ರೋನ್ಗಳಂತಹ ತಂತ್ರಜ್ಞಾನಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕ ಸಹಕಾರ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಸಂಘರ್ಷವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಡಿಸಿಎಫ್ ಪರಮೇಶ್ ತಿಳಿಸಿದರು.
