ಮಂಗಳೂರು: ‘ಕಾಟೇರ’ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಇರುವ ನಟ ದರ್ಶನ್ ಅವರು ಈಗ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ (Kuttar Koragajja Temple) ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪದಲ್ಲಿ ಇರುವ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಬಂದ ದರ್ಶನ್ ಅವರ ಜೊತೆ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಕೂಡ ಸಾಥ್ ನೀಡಿದ್ದಾರೆ. ಕೊರಗಜ್ಜನ ದರ್ಶನ ಪಡೆದ ದರ್ಶನ್ ಅವರು ದೈವದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ಜೊತೆ ಸೆಲ್ಫಿ ತೆಗೆದುಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ದರ್ಶನ್ (Darshan), ಚಿಕ್ಕಣ್ಣ, ಯಶಸ್ ಸೂರ್ಯ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ರಾಜಕೀಯದ ಕುರಿತು ಪ್ರಶ್ನೆಗೂ ದರ್ಶನ್ ಅವರು ಉತ್ತರ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ (Sumalatha) ಪರವಾಗಿ ಪ್ರಚಾರ ಮಾಡುತ್ತೀರಾ ಎಂದು ಕೇಳಲಾಯಿತು. ‘ಹೆತ್ತ ತಾಯಿಯನ್ನು ಬಿಟ್ಟುಕೊಡಲು ಆಗುತ್ತಾ’ ಎಂದು ಮರುಪ್ರಶ್ನೆ ಹಾಕುವ ಮೂಲಕ ತಾವು ಪ್ರಚಾರ ಮಾಡುವುದನ್ನು ದರ್ಶನ್ ಅವರು ಖಚಿತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.