ವ್ಯವಸ್ಥೆಯ ಬಗ್ಗೆ ಮಾತಾಡುತ್ತಾ ಭಾವುಕರಾದರು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬ್ರಿಟಿಷ್ ಕಾಲದ ಶಿಕ್ಷಣ ಪದ್ಧತಿಯನ್ನೇ ನಾವು ಈಗಲೂ ಅನುಸರಿಸುತ್ತಿರುವ ಬಗ್ಗೆ ಕಾಗೇರಿ ಅವರು ಬೇಸರಗೊಂಡಿದ್ದರು. ಆ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿಲ್ಲ ಮತ್ತು ನಮ್ಮಗಳ ಬದುಕಿನಲ್ಲಿ ಸಾರ್ಥಕತೆಯ ಭಾವ ಮೂಡುತ್ತಿಲ್ಲ ಅಂತ ಅವರು ನೊಂದುಕೊಂಡಿದ್ದಾರೆ.

ವ್ಯವಸ್ಥೆಯ ಬಗ್ಗೆ ಮಾತಾಡುತ್ತಾ ಭಾವುಕರಾದರು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
|

Updated on: Feb 12, 2022 | 5:26 PM

ವಿಧಾನ ಸಭಾ ಸ್ಪೀಕರ್ (Assembly Speaker) ವಿಶ್ವೇಶ್ವರ ಹೆಗಡೆ ಕಾಗೇರಿ (Vishweshvar Hegde Kageri) ಅವರು ಭಾವುಕ ಜೀವಿ. ಸೋಮವಾರದಿಂದ ವಿಧಾನಸಭೆಯ ಜಂಟಿ ಅಧಿವೇಶನ (Joint Session) ಆರಂಭವಾಗಲಿದ್ದು ಅದೇ ಹಿನ್ನೆಲೆ ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಕಾಗೇರಿ ಅವರು ಹದಗೆಡುತ್ತಿರುವ ಸಮಾಜವನ್ನು ನೆನೆದು ಭಾವುಕರಾಗಿಬಿಟ್ಟರು. ಅವರ ಒಂದು ಹೊಸಮುಖ ನಮಗೆ ಪರಿಚಯವಾಯಿತು ಮಾರಾಯ್ರೇ. ಹಿಂದೆ ಅವರು ಸಾರ್ವಜನಿಕವಾಗಿ ಭಾವುಕರಾದ ಸಂದರ್ಭ ಪ್ರಾಯಶಃ ಕನ್ನಡಿಗರು ನೋಡಿಲ್ಲ. ಕಾಗೇರಿ ಅವರು ಕಣ್ಣೀರು ಹಾಕುವ ಮೊದಲು ಈ ಮಾತುಗಳನ್ನು ಹೇಳುತ್ತಾರೆ: ನಮಗೆ ಜೀವನದ ಕಲ್ಪನೆಗಳೇ ಇಲ್ಲ. ಜೀವನದ ಸಾರ್ಥಕತೆಯ ಭಾಗವೇ ಇಲ್ಲ ನಮಗೆ. ನಮ್ಮಲ್ಲಿ ಆ ನಂಬಿಕೆಗಳು ಮತ್ತು ವಿಶ್ವಾಸಗಳು ಬಾರದೇ ಹೋದರೆ ಈಗಿನ ವ್ಯವಸ್ಥೆಯನ್ನೂ ಚೆನ್ನಾಗಿ ನಡೆಸಲಾಗುವುದಿಲ್ಲ. ನಾವಿರುವ ವ್ಯವಸ್ಥೆ ಅಥವಾ ಸಮಾಜ ಸರಿಯಾಗಿ ನಡೆಸಬೇಕಾದರೆ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕು. ಆ ಪ್ರಯತ್ನಗಳು…ಅಂತ ಹೇಳುವಾಗ ಅವರು ಭಾವುಕರಾಗಿಬಿಡುತ್ತಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬ್ರಿಟಿಷ್ ಕಾಲದ ಶಿಕ್ಷಣ ಪದ್ಧತಿಯನ್ನೇ ನಾವು ಈಗಲೂ ಅನುಸರಿಸುತ್ತಿರುವ ಬಗ್ಗೆ ಕಾಗೇರಿ ಅವರು ಬೇಸರಗೊಂಡಿದ್ದರು. ಆ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿಲ್ಲ ಮತ್ತು ನಮ್ಮಗಳ ಬದುಕಿನಲ್ಲಿ ಸಾರ್ಥಕತೆಯ ಭಾವ ಮೂಡುತ್ತಿಲ್ಲ ಅಂತ ಅವರು ನೊಂದುಕೊಂಡಿದ್ದಾರೆ. ಹಾಗಾಗೇ ನಮ್ಮ ಜ್ಞಾನದ ವಿಸ್ತಾರ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ ಅಂತ ಅವರು ಹೇಳಿದ್ದಾರೆ.

ಹಿಜಾಬ್ ವಿವಾದದ ಬಗ್ಗೆಯೂ ಮಾತಾಡಿರುವ ಅವರು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ, ವಿದ್ಯಾರ್ಥಿಗಳು ನ್ಯಾಯಾಂಗದ ಮೇಲೆ ವಿಶ್ವಾಸ ಇಟ್ಟುಕೊಳ್ಳಬೇಕು ಮತ್ತು ಅದು ನೀಡಿರುವ ಆದೇಶವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:   ಜನರೊಂದಿಗೆ ಬೆರೆತು ಕ್ರಿಕೆಟ್ ಆಡಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ; ವಿಡಿಯೋ ವೈರಲ್

Follow us