ಮಾತಾ ವೈಷ್ಣೋ ದೇವಿ ಮಂದಿರ ಸಂಕೀರ್ಣದಲ್ಲಿ ಮೊದಲ ಬಾರಿ ನಡೆದ ಕಾಲ್ತುಳಿತದ ದುರ್ಘಟನೆ; ಕನಿಷ್ಟ 12 ಭಕ್ತರ ದುರ್ಮರಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 01, 2022 | 7:42 PM

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂದಿರದ ಸಂಕೀರ್ಣದಲ್ಲಿ ಎರಡು ಗುಂಪುಗಳ ನಡುವೆ ಶುರುವಾದ ಘರ್ಷಣೆ ಕಾಲ್ತುಳಿತದಲ್ಲಿ ಪರ್ಯಾವಸನಗೊಂಡಿದೆ. ಕೇವಲ 20,000 ಜನರ ಸಾಮರ್ಥ್ಯದ ಅವರಣದಲ್ಲಿ 50,000 ಕ್ಕೂ ಹೆಚ್ಚು ಭಕ್ತಾದಿಗಳು ನೆರೆದಿದ್ದರು ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರನಲ್ಲಿರುವ ಹಿಂದೂ ಪವಿತ್ರ ಸ್ಥಳ ಮಾತಾ ವೈಷ್ಣೋ ದೇವಿ ಮಂದಿರದ ಆವರಣದಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತ ದುರ್ಘಟನೆಯಲ್ಲಿ ಕನಿಷ್ಟ 12 ಜನ ಮೃತಪಟ್ಟಿದ್ದಾರೆ ಮತ್ತು 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದೇವಸ್ಥಾನ ಅವರಣದಲ್ಲಿ ಇದೇ ಮೊದಲ ಬಾರಿಗೆ ಕಾಲ್ತುಳಿತದ ಅವಗಢ ಸಂಭವಿಸಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂದಿರದ ಸಂಕೀರ್ಣದಲ್ಲಿ ಎರಡು ಗುಂಪುಗಳ ನಡುವೆ ಶುರುವಾದ ಘರ್ಷಣೆ ಕಾಲ್ತುಳಿತದಲ್ಲಿ ಪರ್ಯಾವಸನಗೊಂಡಿದೆ. ಕೇವಲ 20,000 ಜನರ ಸಾಮರ್ಥ್ಯದ ಅವರಣದಲ್ಲಿ 50,000 ಕ್ಕೂ ಹೆಚ್ಚು ಭಕ್ತಾದಿಗಳು ನೆರೆದಿದ್ದರು ಎನ್ನಲಾಗಿದೆ. ಕಲಹದಲ್ಲಿ ತೊಡಗಿದ್ದ ಗುಂಪುಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರಿಂದ ಮಂದಿರ ಸಂಕೀರ್ಣದಲ್ಲಿ ಸ್ಥಿತಿ ಬಿಗಡಾಯಿಸಿ ನಿಯಂತ್ರಣ ತಪ್ಪಿದೆ.

ಗಾಯಗೊಂಡಿರುವ 15 ಜನರಲ್ಲಿ 13 ಜನರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಜಮ್ಮುನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಣಕ್ಕೀಡಾದವರಲ್ಲಿ 8 ಜನರ ಗುರುತು ಸಿಕ್ಕಿದ್ದು ಅವರ ಹೆಸರುಗಳು ಇಂತಿವೆ: ಧೀರಜ್ ಕುಮಾರ್ (26), ಶ್ವೇತಾ ಸಿಂಗ್ (35), ವಿನಯ್ ಕುಮಾರ್ (24), ಸೋನು ಪಾಂಡೆ (24), ಮಮತಾ (38), ಧರ್ಮ್ವೀರ್ ಸಿಂಗ್ (35), ವನೀತ್ ಕುಮಾರ್ (38) ಮತ್ತು ಡಾ ಅರುಣ ಪ್ರತಾಪ್ ಸಿಂಗ್ (30).

ಗುರುತು ಸಿಕ್ಕವರಲ್ಲಿ ಒಬ್ಬರು ಸ್ಥಳೀಯರಾಗಿದ್ದು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ನೌಶೀರಾ ಪ್ರಾಂತ್ಯದವರಾಗಿದ್ದರೆ, ಉಳಿದವರು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.

ಇದನ್ನೂ ಓದಿ:    ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತ ಪ್ರಕರಣ; ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​

Published On - 7:42 pm, Sat, 1 January 22

Follow us on