ಬಳ್ಳಾರಿಯಲ್ಲಿ ಕೊಲ್ಕತ್ತಾ ಕಲಾವಿದರ ಕೈಚಳಕ: 20 ಅಡಿ ಎತ್ತರದ ರಾಧಾಕೃಷ್ಣ ಮಾದರಿ ಗಣಪತಿಗಳಿಗೆ ಫುಲ್ ಡಿಮ್ಯಾಂಡ್

Edited By:

Updated on: Sep 11, 2026 | 6:17 PM

ಗಣಿನಾಡು ಬಳ್ಳಾರಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಜಿಲ್ಲಾಡಳಿತದ ಸೂಚನೆಯಂತೆ ಮಣ್ಣಿನ ಗಣಪತಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಪಿಒಪಿ ಮೂರ್ತಿಗಳಿಗೆ ಸಂಪೂರ್ಣ ನಿಷೇಧವಿದೆ. ಕೊಲ್ಕತ್ತಾ ಮಾದರಿ, ರಾಧಾಕೃಷ್ಣ, ಪುರಿ ಜಗನ್ನಾಥ, ಪರಿಸರ ಜಾಗೃತಿ ಮೂರ್ತಿಗಳು ಜನರ ಕಣ್ಮನ ಸೆಳೆಯುತ್ತಿವೆ. ಸಮುದಾಯ ಗಣಪತಿಗಳು ಮತ್ತು ಮನೆ ಗಣಪತಿಗಳ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲು ಬಳ್ಳಾರಿ ಜನರು ಸಿದ್ಧರಾಗಿದ್ದಾರೆ.

ಬಳ್ಳಾರಿ, ಸೆ.11:  ಜಿಲ್ಲಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಸೋಮವಾರ ಗಣೇಶ ಹಬ್ಬವಿದ್ದು, ಜನರು ಸಡಗರದಿಂದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಜಿಲ್ಲಾಡಳಿತವು ಕೇವಲ ಮಣ್ಣಿನ ಗಣಪತಿಗಳನ್ನು ಕೂರಿಸಲು ಅವಕಾಶ ನೀಡಿದ್ದು, ಪಿಒಪಿ ಗಣಪತಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಪಿಒಪಿ ಮೂರ್ತಿಗಳನ್ನು ತಯಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ವಿಶ್ವಕರ್ಮ ಸಮಾಜದ ಕಲಾವಿದರು ಮಣ್ಣಿನ ಗಣಪತಿಗಳನ್ನು ತಯಾರಿಸುತ್ತಿದ್ದಾರೆ. ವಿಶೇಷವಾಗಿ, ನಾಲ್ಕು ತಿಂಗಳ ಹಿಂದೆಯೇ ಕೊಲ್ಕತ್ತಾದಿಂದ ಬಂದಿದ್ದ ಕಲಾವಿದರು ಬಳ್ಳಾರಿಯಾದ್ಯಂತ ವಿವಿಧ ಆಕೃತಿಗಳಲ್ಲಿ ಸುಂದರ ಗಣೇಶ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ರಾಧಾಕೃಷ್ಣ ಮಾದರಿಯ ಗಣಪತಿಗಳು ಜನರ ಗಮನ ಸೆಳೆಯುತ್ತಿವೆ. ಐದರಿಂದ 20 ಅಡಿ ಎತ್ತರದ ಮೂರ್ತಿಗಳು ಲಭ್ಯವಿದ್ದು, ಜನರು ತಮ್ಮಿಷ್ಟದ ಗಣಪತಿಗಳನ್ನು ಖರೀದಿಸುತ್ತಿದ್ದಾರೆ. ಪ್ರತಿ ಏರಿಯಾದಲ್ಲಿ ಯುವಕ ಮಂಡಳಿಗಳು ಸಮುದಾಯ ಗಣಪತಿಗಳನ್ನು ಸ್ಥಾಪಿಸಲು ವೇದಿಕೆ ಸಿದ್ಧಪಡಿಸಿದ್ದು, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ಧವಾಗಿವೆ. ಬಳ್ಳಾರಿಯಲ್ಲಿ ಗಣೇಶ ಹಬ್ಬವು ಸಾಮರಸ್ಯದ ಸಂಕೇತವಾಗಿ ಮೂಡಿಬರಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 11, 2026 06:15 PM
Loading...
Unable to load recommendations.
Follow Us