ಹಿಂದೂ ಧರ್ಮದಿಂದ ಲಿಂಗಾಯತರ ದೂರ ಮಾಡಲು ಕಮ್ಯೂನಿಸ್ಟ್ ಮೈಂಡೆಡ್ ಸ್ವಾಮೀಜಿಗಳ ಸಂಚು: ಯತ್ನಾಳ್ ಕಿಡಿ

Updated on: Sep 19, 2025 | 12:32 PM

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಬಗ್ಗೆ ಮಾತನಾಡಿದ್ದು, ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಭೇದಾಭಿಪ್ರಾಯಗಳನ್ನು ತಪ್ಪಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಕೆಲವು ಸ್ವಾಮೀಜಿಗಳು ಉದ್ದೇಶಪೂರ್ವಕವಾಗಿ ಈ ಎರಡು ಸಮುದಾಯಗಳ ನಡುವೆ ಕಂದಕ ನಿರ್ಮಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹುಬ್ಬಳ್ಳಿ, ಸೆಪ್ಟೆಂಬರ್ 19: ಕೆಲವು ಮಂದಿ ಕಮ್ಯೂನಿಸ್ಟ್ ಮೈಂಡ್​ಸೆಟ್​ನ ಸ್ವಾಮೀಜಿಗಳು ಹಿಂದೂ ಧರ್ಮದಿಂದ ಲಿಂಗಾಯತರ ದೂರ ಮಾಡಲು ಸಂಚು ಹೂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವಿನ ಸಾಮ್ಯತೆಗಳನ್ನು ಒತ್ತಿ ಹೇಳಿದರು. ದುರದೃಷ್ಟವಶಾತ್, ಕೆಲವು ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಕಂದಕವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ಈ ಸ್ವಾಮೀಜಿಗಳು ಲಿಂಗಾಯತ ಧರ್ಮ ಅಥವಾ ಶೈವರ ಉದ್ಧಾರದಲ್ಲಿ ಆಸಕ್ತಿ ಹೊಂದಿಲ್ಲ. ಬದಲಾಗಿ, ಅವರು ಇಡೀ ವೀರಶೈವ-ಲಿಂಗಾಯತ ಸಮುದಾಯವನ್ನು ಸನಾತನ ಹಿಂದೂ ಧರ್ಮದಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.

ಪಾದಪೂಜೆ ಯಾಕೆ ಮಾಡಿಸಿಕೊಳ್ತೀರಿ: ಯತ್ನಾಳ್ ಪ್ರಶ್ನೆ

ಹಿಂದೂ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳನ್ನು ಅವಮಾನಿಸುವುದೇ ಕೆಲವು ಮಠಾಧೀಶರ ಉದ್ಯೋಗವಾಗಿದೆ. ಬಸವಣ್ಣನವರ ತತ್ವಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು ಅವರಿಗೆ ಚಾಳಿಯಾಗಿಬಿಟ್ಟಿದೆ ಎಂದು ಯತ್ನಾಳ್ ಟೀಕಿಸಿದರು. ಅಲ್ಲದೇ, ಹಿಂದೂ ಧರ್ಮದ ಆಚರಣೆಗಳನ್ನು ಅಪಮಾನಿಸುವ ನೀವು, ಬಸವಣ್ಣನ ತತ್ವವನ್ನಷ್ಟೇ ಅನುಸರಿಸುತ್ತೇವೆ ಎನ್ನುವ ನೀವು ಪಾದ ಪೂಜೆ ಯಾಕೆ ಮಾಡಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಲಿಂಗಾಯತ ಮತ್ತು ವೀರಶೈವ ಧರ್ಮಗಳು ಇನ್ನೂ ಭಾರತ ಸರ್ಕಾರದಿಂದ ಅಧಿಕೃತ ಮಾನ್ಯತೆಯನ್ನು ಪಡೆದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 19, 2025 12:26 PM