ದೇಗುಲಕ್ಕೆ ಸಮೀಕ್ಷೆ ಸ್ಟಿಕ್ಕರ್ ಅಂಟಿಸಿ ಮತ್ತೊಂದು ಎಡವಟ್ಟು ಮಾಡಿಕೊಂಡ ಜಾತಿ ಸಮೀಕ್ಷೆ ತಂಡ
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆ ವೇಳೆ ಹಲವು ಎಡವಟ್ಟುಗಳು ವರದಿಯಾಗಿವೆ. ವರದಾಂಜನೇಯ ಸ್ವಾಮಿ ದೇಗುಲಕ್ಕೆ ಗಣತಿದಾರರು ಜಾತಿ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿದ್ದು, ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದರ ಜತೆಗೆ ಸಮೀಕ್ಷೆಯ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ದಸರಾ ರಜೆಯನ್ನು ಅಕ್ಟೋಬರ್ 17ರವರೆಗೆ ವಿಸ್ತರಿಸಲು ಮನವಿ ಮಾಡಿದೆ.
ಬೆಂಗಳೂರು, ಅ.7: ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಜಾತಿಗಣತಿ ಸಮೀಕ್ಷೆಯನ್ನು (Bengaluru Caste Survey) ಆರಂಭಿಸಿದೆ, ಪ್ರಾರಂಭ ದಿನದಿಂದಲ್ಲೂ ಸಮೀಕ್ಷೆ ತಂಡ ಒಂದಲ್ಲ ಒಂದು ಎಡವಟ್ಟು ಮಾಡಿಕೊಂಡು ಬಂದಿದೆ. ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ದೇಗುಲಕ್ಕೂ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಲಾಗಿದೆ. ಎಸ್.ಪಿ. ರಸ್ತೆ ಬಳಿ ಇರುವ ಪುರಾತನ ವರದಾಂಜನೇಯ ಸ್ವಾಮಿ ದೇಗುಲದ ಮೇಲೆ ಜಾತಿ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ಘಟನೆ 15 ದಿನಕ್ಕೂ ಮೊದಲೇ ನಡೆದಿತ್ತು. ಇದೀಗ ತಡವಾಗಿ ಬೆಳಕಿಗೆ ಬಂದಿದೆ. ದೇಗುಲಕ್ಕೆ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿರುವ ಕುರಿತು ವರದಾಂಜನೇಯ ದೇಗುಲದ ಅರ್ಚಕ ಶಿವಕುಮಾರ್ ದೀಕ್ಷಿತ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ನಡೆಸುವವರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಮತ್ತೊಬ್ಬ ಅರ್ಚಕ ಅಶೋಕ್ ಕುಮಾರ್ ದೀಕ್ಷಿತ್, “ದೇವರಿಗೂ ಸಮೀಕ್ಷೆ ಮಾಡೋದಕ್ಕೆ ಮುಂದಾಗಿರಬೇಕು. ಹಾಗಾಗಿ ದೇಗುಲದ ಮುಂದೆ ಆ ಸ್ಟಿಕ್ಕರ್ ಅಂಟಿಸಿದ್ದಾರೆ. ಇವರಿಗೆ ಇಲ್ಲಿ ಯಾರಿದ್ದಾರೆ ಅಂತ ಗೊತ್ತಾಗದಿದ್ರೆ ಹೇಗೆ?” ಎಂದು ಪ್ರಶ್ನಿಸಿದ್ದಾರೆ.ನಗರ್ತಪೇಟೆ ಮುಖ್ಯ ರಸ್ತೆಯಲ್ಲಿರುವ ಈ ದೇಗುಲ ಪುರಾತನವಾದುದು ಮತ್ತು ಧರ್ಮರಾಯಸ್ವಾಮಿ ದೇವಾಲಯದ ಸಮೀಪದಲ್ಲಿದೆ. ಇಲ್ಲಿ ಯಾವುದೇ ಮಾನವರು ವಾಸಿಸುವುದಿಲ್ಲ, ಕೇವಲ ಆಂಜನೇಯ ಸ್ವಾಮಿ, ಸತ್ಯನಾರಾಯಣ ಸ್ವಾಮಿ ಮತ್ತು ದುರ್ಗಾ ಪರಮೇಶ್ವರಿ ಎಂಬ ಮೂರು ದೇವರ ಮೂರ್ತಿಗಳು ಮಾತ್ರ ಇವೆ ಎಂದು ಹೇಳಿದ್ದಾರೆ. ದೇಗುಲದ ಬಾಗಿಲು ಹಾಕಿದಾಗ ಸ್ಟಿಕ್ಕರ್ ಅಂಟಿಸಿರಬೇಕು ಎಂದು ಹೇಳಿದ್ದಾರೆ. ಇನ್ನು ಇದರ ಜತೆಗೆ ಶಿಕ್ಷಕರ ದಸರಾ ರಜೆಯನ್ನು ಅಕ್ಟೋಬರ್ 17ರವರೆಗೆ ವಿಸ್ತರಿಸಲು ಮನವಿ ಮಾಡಲಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

