ಲಕ್ಷ್ಮೀಪುರ ಬಿಡಿಎ ಲೇಔಟ್​ನಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿಬಿದ್ದ ಜನ

Updated on: Apr 24, 2026 | 11:47 AM

ನೆಲಮಂಗಲದ ಲಕ್ಷ್ಮೀಪುರ ಬಿಡಿಎ ಲೇಔಟ್‌ನಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಿನ ಜಾವ ವಾಕಿಂಗ್‌ಗೆ ಬಂದವರಿಗೆ ಬ್ಯಾಗ್​​ನಲ್ಲಿ ಶವ ಇರುವುದು ಕಾಣಿಸಿದೆ. ಕೊಲೆ ಮಾಡಿ ಬಿಸಾಡಿದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹ ಪುರುಷನದ್ದು ಎಂದು ಗುರುತಿಸಲಾಗಿದೆ.

ನೆಲಮಂಗಲ, ಏಪ್ರಲ್ 24: ನೆಲಮಂಗಲದ ಲಕ್ಷ್ಮೀಪುರ ಬಿಡಿಎ ಲೇಔಟ್‌ನಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಚೀಲಕ್ಕೆ ತುಂಬಿ ಇಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗಿನ ಜಾವ ವಾಕಿಂಗ್‌ಗೆ ಬಂದ ಸ್ಥಳೀಯರೊಬ್ಬರು ನಾಯಿಗಳು ಚೀಲವನ್ನು ಎಳೆಯುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ವಾಯುವ್ಯ ವಿಭಾಗದ ಗಂಗಮ್ಮಗುಡಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಕೋ (ಸೀನ್ ಆಫ್ ಕ್ರೈಂ ಆಫೀಸರ್) ತಂಡ ಕೂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪತ್ತೆಯಾದ ಶವ ಪುರುಷನದ್ದು ಎಂದು ಗುರುತಿಸಲಾಗಿದೆ. ಈ ಪ್ರದೇಶವು ನಿರ್ಜನವಾಗಿದ್ದು, ಖಾಲಿ ಸೈಟ್‌ಗಳಿಂದ ಕೂಡಿದೆ. ಪೊಲೀಸರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಸೋಕೋ ತಂಡದ ಪರಿಶೀಲನೆ ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ನಂತರ ತನಿಖೆ ಮುಂದುವರಿಸಲಾಗುವುದು ಎಂದು ತಿಳಿಸಲಾಗಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More