ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್‌ಗಳು! ತಪ್ಪಿದ ಅನಾಹುತ

Updated on: Apr 30, 2026 | 11:38 AM

ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ದಾಖಲೆ ಮುರಿದ ಭಾರಿ ಮಳೆಗೆ ಸಿಎಂ ಸಿದ್ದರಾಮಯ್ಯ ಅವರ ‘ಕೃಷ್ಣ’ ನಿವಾಸದ ಗೋಡೆ ಮತ್ತು ಕಾಂಪೌಂಡ್ ಮೇಲೆ ಕಬ್ಬಿಣದ ವಾಲ್‌ಗಳು ಹಾಗೂ ಮರದ ಕೊಂಬೆಗಳು ಕುಸಿದು ಬಿದ್ದಿವೆ. ಸಿಎಂ ಮನೆಯಲ್ಲಿದ್ದಾಗ್ಲೇ ಈ ಘಟನೆ ಸಂಭವಿಸಿದ್ದು, ಭಾರಿ ದುರಂತ ತಪ್ಪಿದೆ. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಏಪ್ರಿಲ್ 30: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರಿ ಮಳೆಯ ಅಬ್ಬರಕ್ಕೆ ಸಾಮಾನ್ಯ ಜನರು ಮಾತ್ರವಲ್ಲದೆ, ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ತತ್ತರಿಸಿದೆ! ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ‘ಕೃಷ್ಣ’ ಕಾಂಪೌಂಡ್ ಮೇಲೆ ಮರದ ಕೊಂಬೆಗಳು ಮತ್ತು ಕಬ್ಬಿಣದ ವಾಲ್‌ಗಳು ಕುಸಿದು ಬಿದ್ದಿವೆ. ಮುಖ್ಯಮಂತ್ರಿಗಳು ಮನೆಯಲ್ಲಿದ್ದಾಗಲೇ ನಿವಾಸದ ಪಕ್ಕದ ಗೋಡೆ ಮೇಲೆ ಅಳವಡಿಸಲಾಗಿದ್ದ ಕಬ್ಬಿಣದ ವಾಲ್‌ಗಳು ಏಕಾಏಕಿ ಕುಸಿದು ಬಿದ್ದಿವೆ. ಭಾರಿ ಗಾಳಿ ಮಳೆಗೆ ಮರದ ಬೃಹತ್ ಕೊಂಬೆಗಳು ಕಾಂಪೌಂಡ್ ಮೇಲೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಕೇರಳದ ಇಬ್ಬರು ಹಾಗೂ ಅಸ್ಸಾಂನ ಓರ್ವ ಕಾರ್ಮಿಕ ಸೇರಿದಂತೆ ಒಟ್ಟು 7 ಜನರು ಮೃತಪಟ್ಟ ಘೋರ ದುರಂತದ ಬೆನ್ನಲ್ಲೇ ಸಿಎಂ ಮನೆ ಬಳಿಯೂ ಕಂಪೌಂಡ್​ಗೆ ಮರದ ಕೊಂಬೆಗಳು, ಕಬ್ಬಿಣದ ವಾಲ್ ಕುಸಿದಿದೆ.

ಬೆಂಗಳೂರಿನಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ಬರೋಬ್ಬರಿ 111 ಮಿಲಿ ಮೀಟರ್ ಮಳೆಯಾಗಿದ್ದು, ಇದು ಏಪ್ರಿಲ್ ತಿಂಗಳ ಇತಿಹಾಸದಲ್ಲೇ ದಾಖಲಾದ ಅತಿ ದೊಡ್ಡ ಪ್ರಮಾಣದ ಮಳೆಯಾಗಿದೆ. ಈ ಹಿಂದೆ 2001ರ ಏಪ್ರಿಲ್ 19 ರಂದು ಇಷ್ಟೇ ಪ್ರಮಾಣದ ಮಳೆಯಾಗಿತ್ತು. ಕೇವಲ ಕೆಲವೇ ಗಂಟೆಗಳಲ್ಲಿ ಸುರಿದ ಈ ಮಳೆ ನಗರದಾದ್ಯಂತ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ವರದಿ, ವಿಡಿಯೋ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 30, 2026 11:02 AM
Follow Us