ಬೀದರ್ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ ನೋಡಿ
ಬೀದರ್ ಜಿಲ್ಲೆಯು ಐತಿಹಾಸಿಕ ಕೋಟೆ, ಗುಮ್ಮಜ್ಗಳು ಮತ್ತು ಪ್ರಾಚೀನ ದೇವಾಲಯಗಳಂತಹ ಭವ್ಯ ಸ್ಮಾರಕಗಳಿಂದ ಸಮೃದ್ಧವಾಗಿದೆ. ಪ್ರತಿನಿತ್ಯ ನೂರಾರು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಆದರೂ, ಮಾರ್ಗದರ್ಶಕರ ಕೊರತೆ, ಮಾಹಿತಿ ಫಲಕಗಳ ಅಭಾವ, ಕುಡಿಯುವ ನೀರು ಮತ್ತು ಊಟದ ಸೌಲಭ್ಯಗಳಂತಹ ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.
ಬೀದರ್, ಸೆಪ್ಟೆಂಬರ್ 16: ಕರ್ನಾಟಕದ ಉತ್ತರ ಪೂರ್ವ ಭಾಗದಲ್ಲಿರುವ ಐತಿಹಾಸಿಕ ಬೀದರ್ ಜಿಲ್ಲೆಯು ಬಹಮನಿ ಸುಲ್ತಾನರ ಕಾಲದ ಭವ್ಯ ಕೋಟೆ, ಅಷ್ಟೂರಿನ ಗುಮ್ಮಜ್ಗಳು, ಉಮಾ ಮಹೇಶ್ವರಿ ದೇವಾಲಯ ಮತ್ತು ಅಂದಿನ ಕಾಲದ ಅನನ್ಯ ಜಲಮಾರ್ಗ ಸೇರಿ ಹಲವು ಶ್ರೀಮಂತ ಸ್ಮಾರಕಗಳಿಗೆ ನೆಲೆಯಾಗಿದೆ. ಕಲ್ಯಾಣಿ ಚಾಲುಕ್ಯರು ಮತ್ತು ಬಹಮನಿ ಸುಲ್ತಾನರು ಆಳಿದ ಈ ನೆಲವು ಅಪಾರ ಇತಿಹಾಸವನ್ನು ಹೊಂದಿದೆ. ಪ್ರತಿ ವರ್ಷವೂ ದೇಶ-ವಿದೇಶಗಳಿಂದ ನೂರಾರು ಪ್ರವಾಸಿಗರು, ಶಾಲಾ ವಿದ್ಯಾರ್ಥಿಗಳು ಈ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ, ಈ ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಗೈಡ್ಗಳ ಕೊರತೆ ಎದ್ದು ಕಾಣುತ್ತಿದೆ. ಸ್ಮಾರಕಗಳ ಇತಿಹಾಸ, ವೈಶಿಷ್ಟ್ಯಗಳನ್ನು ತಿಳಿಸಲು ಸರಿಯಾದ ಮಾಹಿತಿ ಫಲಕಗಳಿಲ್ಲ. ಶಾಲಾ ಮಕ್ಕಳಿಗೆ ಊಟ ಮಾಡಲು ಸೂಕ್ತ ಸೌಲಭ್ಯಗಳಿಲ್ಲ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಈ ತಾಣಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
