ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ತಿರುವು: ಸ್ಫೋಟಕ ಅಂಶ ಬಿಚ್ಚಿಟ್ಟ ವಿಠಲ ಗೌಡ

Edited By:

Updated on: Sep 11, 2025 | 10:25 PM

ಧರ್ಮಸ್ಥದಲ್ಲಿ ನೂರಾರು ಶವ ಹೂತಿರುವುದಾಗಿ ಮಾಸ್ಕ್​ ಮ್ಯಾನ್ ಚಿನ್ನಯ್ಯ ಆರೋಪಿಸಿದ್ದು ಇದರ ಬೆನ್ನಲ್ಲೇ ಎಸ್​​ಐಟಿ ತನಿಖೆ ಅಧಿಕಾರಿಗಳು ಸ್ಥಳ ಶೋಧ ನಡೆಸಿದ ವೇಳೆ ಯಾವುದೇ ಮೃತದೇಹಗಳ ಕುರುಹುಗಳು ಪತ್ತೆಯಾಗಿಲ್ಲ. ಕೊನೆಗೆ ಎಸ್​​ಐಟಿ ಚಿನ್ನಯ್ಯನ್ನೇ ಬಂಧಿಸಿದೆ. ಇನ್ನೇನು ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್​ ಹಂತ ತಲುಪಿದ ಎನ್ನುವಷ್ಟರಲ್ಲೇ ಮತ್ತೊಂದು ತಿರುವು ಪಡೆದುಕೊಂಡಿದ್ದು, ಎಸ್​​ಐಟಿ ವಿಚಾರಣೆಗೊಳಗಾಗಿದ್ದ ವಿಠಲ್ ಗೌಡ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.

ಮಂಗಳೂರು, (ಸೆಪ್ಟೆಂಬರ್ 11): ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ  (Dharmasthala mass burial case) ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಎಸ್​​ಐಟಿ ವಿಚಾರಣೆ ಬಳಿಕ ವಿಠಲ್ ಗೌಡ ಕೆಲ ಮಹತ್ವದ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಹೌದು.. ಬುರುಡೆ ಪ್ರಕರಣ ಸಂಬಂಧ ವಿಠಲ ಗೌಡ ಅವರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದೆ. ಅಲ್ಲದೇ ಕಲೆ ಜಾಗಗಳಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದು, ಇದೀಗ ಸ್ಥಳ ಮಹಜರು ವೇಳೆ ಮಾಹಿತಿಯನ್ನು ವಿಠಲ ಗೌಡ (vittal gowda) ಬಹಿರಂಗಪಡಿಸಿದ್ದಾರೆ. ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಆ ವೇಳೆ ಹೆಣಗಳ ರಾಶಿ ಸಿಕ್ಕಿದೆ ಎಂದು ವಿಠಲ ಗೌಡ ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ವಿಡಿಯೋ ಬಿಡುಗಡೆ ಮಾಡಿರುವ ವಿಠಲ ಗೌಡ, ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿದೆ. ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲಿ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿ‌ನ ಎಲುಬು ಇದೆ ಅಂತ ಗೋಚರ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡಾ ಸಿಕ್ಕಿದೆ. ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು. ಐದಾರು ಫೀಟ್‌ನಲ್ಲಿ ಬುರುಡೆ ರಾಶಿ ಇದೆ. ಎಲುಬು ಅಲ್ಲಲ್ಲಿ ಸ್ಪ್ರೆಡ್ ಆಗಿದೆ. ಕಳೆಬರಹಗಳು ಅಲ್ಲಲ್ಲಿ ಇತ್ತು, ಬುರುಡೆಗಳು ಮಣ್ಣಲ್ಲಿ ಎದ್ದು ಕಾಣ್ತಿತ್ತು. ನೋಡಿದ ಬುರುಡೆಗಳು ಹಾಗೆ ಇದೆ. ಆದ್ರೆ, ಅದನ್ನು ಮುಟ್ಟಿಲ್ಲ. ತನಿಖೆಗೆ ಯಾವಾಗ ಕರೆದ್ರು ಬರ್ತೇನೆ ಎಂದು ಹೇಳಿದ್ದೇವೆ. ಚಿನ್ನಯ್ಯ, ತಾನಸಿ, ರಂಗ, ಸುಬ್ರಹ್ಮಣ್ಯ ಎಲ್ಲ ಹೇಳಿದ್ದಾರೆ. ಅವರ ಮಾಹಿತಿ ಪ್ರಕಾರ ಎಲ್ಲ ತೋರಿಸಲು ರೆಡಿ ಇದ್ದೇನೆ. ಅದೇ ಊರಲ್ಲಿ ಇದ್ದು ಒಂದೇ ಕಡೆ ರಾಶಿ ಹಾಕಿದ್ದು ನೋಡಿ ಅಚ್ಚರಿ ಆಗಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ. ಅದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಹೇಳಿದ್ದಾರೆ.

Published on: Sep 11, 2025 10:24 PM
Follow Us
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More