ನಗರಸಭೆ ಅಧಿಕಾರಿಗಳ ಸುಳ್ಳು ಹೇಳಿಕೆ ಡಿಸಿ ಎದುರೇ ಬಯಲು: ಕಳ್ಳಾಟ ತಿಳಿಯುತ್ತಿದ್ದಂತೆ TV9 ಕ್ಯಾಮರಾಮ್ಯಾನ್ ಮೇಲೆ ಅಧಿಕಾರಿ ದರ್ಪ
ಚಾಮರಾಜನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳನ್ನು ನಿವಾಸಿಗಳು ಬಯಲು ಮಾಡಿದ್ದು, ಸಭೆಯಲ್ಲಿ ವಾಗ್ವಾದ ಏರ್ಪಟ್ಟಿತ್ತು. 15 ದಿನಗಳಿಂದ ನೀರು ಪೂರೈಕೆಯಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಡಿಸಿ ಕೆಂಡಾಮಂಡಲರಾದರು. ಘಟನೆ ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ಅಧಿಕಾರಿಯೊಬ್ಬರು ದರ್ಪ ತೋರಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜನಗರ, ಏ. 28: ಜಿಲ್ಲಾಧಿಕಾರಿ ಕಚೇರಿಯಲ್ಲೇ ಇಂದು ಭಾರಿ ಹೈಡ್ರಾಮಾ ನಡೆದಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಿವಾಸಿಗಳು ಡಿಸಿ ಎದುರೇ ಸಾಕ್ಷಿ ಸಮೇತ ಬಯಲು ಮಾಡಿದ್ದು, ಈ ವೇಳೆ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಚಾಮರಾಜನಗರದ ವಾರ್ಡ್ ನಂ. 26ರ ನಿವಾಸಿಗಳು ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಆಯುಕ್ತರು ಮತ್ತು ಇಂಜಿನಿಯರ್ಗಳು, “ವಾರ್ಡ್ಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು. ಅಧಿಕಾರಿಗಳ ಈ ಹೇಳಿಕೆಯಿಂದ ಆಕ್ರೋಶಗೊಂಡ ನಿವಾಸಿಗಳು ಜಿಲ್ಲಾಧಿಕಾರಿ ಎದುರೇ ನಗರಸಭೆ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. “ಕಳೆದ 15 ದಿನಗಳಿಂದ ಒಂದು ಹನಿ ನೀರು ಪೂರೈಕೆಯಾಗಿಲ್ಲ. ಅಧಿಕಾರಿಗಳು ಡಿಸಿ ಅವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ” ಎಂದು ರೆಡ್ ಹ್ಯಾಂಡ್ ಆಗಿ ಹಿಡಿದು ಹಾಕಿದರು. ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಶ್ರೀರೂಪ ಅವರು ಕೆಂಡಾಮಂಡಲರಾದರು. ಸಭೆಯಲ್ಲಿ ನಡೆಯುತ್ತಿದ್ದ ಈ ವಾಗ್ವಾದವನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ TV9 ಕ್ಯಾಮರಾಮ್ಯಾನ್ ಮೇಲೆ ನಗರಸಭೆ ಅಧಿಕಾರಿ ವೆಂಕಟೇಶ್ ದರ್ಪ ತೋರಿದ್ದಾರೆ. ತಮ್ಮ ಕಳ್ಳಾಟ ಮತ್ತು ಬೇಜವಾಬ್ದಾರಿ ಬಯಲಾದ ಬೆನ್ನಲ್ಲೇ ಆಕ್ರೋಶಗೊಂಡ ವೆಂಕಟೇಶ್, ಚಿತ್ರೀಕರಣ ಮಾಡದಂತೆ ಕ್ಯಾಮರಾ ತಡೆದು ಅಸಭ್ಯವಾಗಿ ವರ್ತಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಈ ರೀತಿ ದರ್ಪ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ