ಧಗಧಗಿಸಿದ ಮಲೆ ಮಹದೇಶ್ವರ ಬೆಟ್ಟಡ ಒಡಲು: 100 ಎಕರೆಗೂ ಅಧಿಕ ವನಸಂಪತ್ತು ನಾಶ
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿಯ ಕಡೆಬೋಳಿ ಬೆಟ್ಟದಲ್ಲಿ ಭೀಕರ ಕಾಳ್ಗಿಚ್ಚು ಸಂಭವಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 100 ಎಕರೆಗೂ ಹೆಚ್ಚು ವನ ಸಂಪತ್ತು, ಗಿಡಮೂಲಿಕೆಗಳು ಭಸ್ಮವಾಗಿವೆ. ಅರಣ್ಯ ಇಲಾಖೆ ಫೈರ್ ಲೇನ್ ನಿರ್ಮಾಣದ ಬಗ್ಗೆ ನೀಡಿದ್ದ ಹೇಳಿಕೆ ಪ್ರಶ್ನಾರ್ಹವಾಗಿದ್ದು, ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ತನಿಖೆ ಅಗತ್ಯವಿದೆ.
ಚಾಮರಾಜನಗರ, ಏಪ್ರಿಲ್ 19: ಮಲೆ ಮಹದೇಶ್ವರ ವನ್ಯಜೀವಿಧಾಮದ ಒಡಲಿಗೆ ಬೆಂಕಿ ಬಿದ್ದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 100 ಎಕರೆಗೂ ಅಧಿಕ ವಿಸ್ತೀರ್ಣದ ಅಮೂಲ್ಯ ವನಸಂಪತ್ತು ಬೆಂಕಿಗಾಹುತಿಯಾಗಿದೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಬೋಳಿ ಬೆಟ್ಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಿಡಮೂಲಿಕೆಗಳ ಕಾಶಿಯಂತಿದ್ದ ಕಡೆಬೋಳಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ವನ್ಯ ಸಂಪತ್ತು ಮತ್ತು ಅಪರೂಪದ ಗಿಡಮೂಲಿಕೆಗಳು ಸುಟ್ಟು ಕರಕಲಾಗಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಫೈರ್ ಲೇನ್ (ಬೆಂಕಿ ರೇಖೆ) ನಿರ್ಮಾಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಬೆಂಕಿ ರೇಖೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರೆ ಇಷ್ಟು ದೊಡ್ಡ ಮಟ್ಟದ ಅವಘಡ ಸಂಭವಿಸುತ್ತಿರಲಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಸರ್ಕಾರಕ್ಕೆ ಫೈರ್ ಲೇನ್ ನಿರ್ಮಾಣದ ಹೆಸರಿನಲ್ಲಿ ತಪ್ಪು ಲೆಕ್ಕ ನೀಡಿ, ಅರಣ್ಯ ಸಂರಕ್ಷಣೆಯ ಹೆಸರಲ್ಲಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.