ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್​, ಸಂಧ್ಯಾವಂದನೆ ಮಂಟಪ ಮುಳುಗಡೆ

| Updated By: ವಿವೇಕ ಬಿರಾದಾರ

Updated on: Jul 17, 2024 | 9:32 AM

ಕಳೆದ 15 ದಿನಗಳಿಂದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪಶ್ಚಿಮ‌ ಘಟ್ಟಗಳ ಸಾಲಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಹೀಗಾಗಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ರಸ್ತೆ ಜಲಾವೃತಗೊಂಡು ಬಂದ್​ ಆಗಿದೆ.

ಚಿಕ್ಕಮಗಳೂರು, ಜುಲೈ 17: ಪಶ್ಚಿಮ‌ ಘಟ್ಟಗಳ (Western Ghats) ಸಾಲಿನಲ್ಲಿ ಮತ್ತು ಶೃಂಗೇರಿ (Sringeri) ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ (Rain) ಹಿನ್ನೆಲೆಯಲ್ಲಿ ತುಂಗಾ ನದಿ (Tunga River) ಉಕ್ಕಿ ಹರಿಯುತ್ತಿದೆ. ತುಂಗಾ ನದಿ ಅಪಯಾದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊಳೆಯ ನೀರು ರಸ್ತೆ ಮೇಲೆ ಬಂದಿದೆ. ಇದರಿಂದ ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ಮಾರ್ಗ ಜಲಾವೃತಗೊಂಡಿದೆ. ಪರ್ಯಾಯ ಮಾರ್ಗ, ಗಾಂಧಿ ಮೈದಾನ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ.

ಇನ್ನು ತುಂಗಾ ನದಿ ‌ತೀರದಲ್ಲಿರುವ ನರಸಿಂಹವನದ ಬಳಿ ಇರುವ ಶೃಂಗೇರಿ ಮಠದ ಸಂಧ್ಯಾವಂದನೆ ಮಂಟಪದ ಒಳಗೂ ನೀರು ಹೊಕ್ಕಿದೆ. ಸಂಧ್ಯಾವಂದನೆ ಮಂಟಪ ಸಂಪೂರ್ಣ ಮುಳುಗುವ ಹಂತಕ್ಕೆ ತಲುಪಿದ್ದು, ಕೇವಲ ಮೂರು ಅಡಿಯಷ್ಟು ಬಾಕಿ ಇದೆ. ವಿಶೇಷ ದಿನಗಳಲ್ಲಿ ಶೃಂಗೇರಿ ಜಗದ್ಗುರುಗಳು ಸಂಧ್ಯಾವಂದನೆ ಮಂಟಪದಲ್ಲಿ ಸಂಧ್ಯಾವಂದನೆ ಮಾಡುತ್ತಾರೆ. ಮತ್ತು ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ.

ಇದನ್ನೂ ಓದಿ: ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಮತ್ತೆ ರೆಡ್ ಅಲರ್ಟ್​, ಅಬ್ಬರಿಸಲಿದೆ ವರ್ಷಧಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 am, Wed, 17 July 24

Follow us on