ಆಪರೇಷನ್ ಕಮಲಕ್ಕೆ ಒಪ್ಪಿದ್ದರೆ ಅಂದೇ ಮಂತ್ರಿಯಾಗ್ತಿದ್ದೆ: ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಶಾಸಕ ಸುಬ್ಬಾರೆಡ್ಡಿ

Updated on: Aug 05, 2026 | 6:06 PM

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಸುಭಾ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಆಪರೇಷನ್ ಕಮಲದ ವೇಳೆ ಪಕ್ಷಾಂತರ ಮಾಡಿದ್ದರೆ ಮಂತ್ರಿ ಆಗ್ತಿದ್ದೆ ಎಂದು ಹೇಳಿ, ಪಕ್ಷಕ್ಕೆ ತೋರಿದ ನಿಷ್ಠೆಗೆ ಬೆಲೆಯಿಲ್ಲ ಎಂದಿದ್ದಾರೆ. ತಮ್ಮ ಬಾಗೇಪಲ್ಲಿ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕೇ ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದು, ಅನುದಾನಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು, ಆ.5: ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಿಡಿ ಹೊತ್ತಿದ್ದು, ಚಿಕ್ಕಬಳ್ಳಾಪುರ ಶಾಸಕ ಸುಭಾ ರೆಡ್ಡಿ ತಮ್ಮ ಬೇಸರ ಹೊರಹಾಕಿದ್ದಾರೆ. ಬಾಗೇಪಲ್ಲಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಚಿವ ಸ್ಥಾನ ಸಿಕ್ಕೇ ಇಲ್ಲವೆಂದು ನೋವು ತೋಡಿಕೊಂಡಿದ್ದಾರೆ. ಸುಭಾ ರೆಡ್ಡಿ ಮಾತನಾಡಿ, ಆಪರೇಷನ್ ಕಮಲದ ವೇಳೆ ನಾನು ಅಡ್ಡದಾರಿನಲ್ಲಿ ಹೋಗಿದ್ದರೆ ಮಂತ್ರಿ ಆಗ್ತಿದ್ದೆ. ಆದರೆ ನನ್ನ ಮನಸ್ಸು ಅದಕ್ಕೆ ಒಪ್ಪಲಿಲ್ಲ. ಯಾವತ್ತಾದರೂ ಪಕ್ಷಕ್ಕೆ ನಿಷ್ಠೆ ತೋರಿದರೆ ಒಳ್ಳೇದಾಗುತ್ತೆ ಎಂದು ನಂಬಿದ್ದೆ. ಆದರೆ ನಾನು ತೋರಿಸಿದ ನಿಷ್ಠೆಯನ್ನು ಪಕ್ಷ ನನಗೆ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿದಾಗ ನನ್ನ ಸ್ನೇಹಿತ ಡಾಕ್ಟರ್ ಸುಧಾಕರ್ ಅವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಆಗ ಇಬ್ಬರೂ ಜೊತೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಉಸ್ತುವಾರಿ ಆಗ್ತೀವಿ ಎಂದಿದ್ದರು. ಆದರೆ ನಾನು ಹೋಗಲಿಲ್ಲ ಎಂದಿದ್ದಾರೆ. ತಮಗೆ ಲಕ್ ಇಲ್ಲ ಎಂದ ಸುಭಾ ರೆಡ್ಡಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರು ತಾವು ಶಾಸಕನಾಗಲು ಯಾವುದೇ ಕ್ಯಾನ್ವಾಸ್ ಮಾಡಿಲ್ಲ. ಒಂದು ರೂಪಾಯಿ ಕೂಡ ಪಾರ್ಟಿ ಫಂಡ್ ನೀಡಿಲ್ಲ ಎಂದು ಹೇಳಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us