ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ದುಃಖ ತೋಡಿಕೊಂಡ ರೇಣುಕಾಸ್ವಾಮಿ ತಂದೆ-ತಾಯಿ

|

Updated on: Jun 25, 2024 | 4:45 PM

ರೇಣುಕಾಸ್ವಾಮಿಯ ತಂದೆತಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮಾಜಿ ಸಚಿವ ಹೆಚ್ ಆಂಜನೇಯ ಕರೆತಂದಂತಿದೆ. ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವರು ಮತ್ತು ಆಂಜನೇಯ ಆ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ದುಃಖತಪ್ತ ಪೋಷಕರೊಂದಿಗೆ ಮಾತಾಡುವುವಾಗ ಆಂಜನೇಯ ಮತ್ತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಲ್ಲಿದ್ದರು.

ಬೆಂಗಳೂರು: ರೇಣುಕಾಸ್ವಾಮಿಯ (Renukaswamy) ಹತ್ಯೆಯಾಗಿ ಎರಡು ವಾರ ಕಳೆದಿದೆ. ನಾವು ವರದಿ ಮಾಡಿರುವ ಹಾಗೆ ಸ್ವಾಮಿಯ ಮೃತ ದೇಹ ನಗರದ ಸುಮನಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ವೊಂದರ ಬಳಿ ಚರಂಡಿಯಲ್ಲಿ ಜೂನ್ 9ರಂದು ಪತ್ತೆಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಚಿತ್ರನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿ ಬೇರೆ ಬೇರೆ ಜೈಲುಗಳಲ್ಲಿರಿಸಲಾಗಿದೆ. ಇವತ್ತು ರೇಣುಕಾಸ್ವಾಮಿಯ ತಂದೆ ಮತ್ತು ಅಮ್ಮ (Renukaswamy parents) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದರು. ಮಗನನ್ನು ಕಳೆದುಕೊಂಡು ಅಪಾರ ದುಃಖದಲ್ಲಿರುವ ಹಿರಿಯ ಜೀವಿಗಳನ್ನು ಮುಖ್ಯಮಂತ್ರಿ ಸಂತೈಸುತ್ತಿರುವುದನ್ನು, ಸಮಾಧಾನದ ಮಾತುಗಳನ್ನು ಹೇಳುತ್ತಿರುವುದು ದೃಶ್ಯಗಳಲ್ಲಿ ನೋಡಬಹುದು. ರೇಣುಕಾಸ್ವಾಮಿಯ ಪತ್ನಿ ಈಗ ಗರ್ಭಿಣಿ. ಅವರ ಹುಟ್ಟುವ ಮಗು ಹುಟ್ಟಿನಿಂದಲೇ ಅನಾಥವೆನಿಸಿಕೊಳ್ಳಲಿದೆ. ಸರ್ಕಾರ ಈ ಕುಟುಂಬಕ್ಕೆ ನೆರವಾಗುವ ಅವಶ್ಯಕತೆಯಂತೂ ಇದೆ. ಸಿದ್ದರಾಮಯ್ಯ ಅವರೊಂದಿಗೆ ಏನು ಮಾತಾಡಿರುವರೆಂದು ಗೊತ್ತಿಲ್ಲ. ಪರಿಹಾರ ಒದಗಿಸುವ ಭರವಸೆ ನೀಡಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರೇಣುಕಾಸ್ವಾಮಿಯ ಪತ್ನಿಗೆ ಒಂದು ಸರ್ಕಾರಿ ನೌಕರಿ ನೀಡಿದರೆ ಕುಟುಂಬಕ್ಕೆ ಬಹುದೊಡ್ಡ ಆಸರೆಯಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರೇಣುಕಾಸ್ವಾಮಿಯ ಕಿವಿ ಕತ್ತರಿಸಿ, ಮನಬಂದಂತೆ ಹಲ್ಲೆ: ದರ್ಶನ್ ಗ್ಯಾಂಗ್​ನ ಪೈಶಾಚಿಕ ಕೃತ್ಯ ಬೆಳಕಿಗೆ

 

Follow us on