ಬೆಳಗಾವಿ ಅಧಿವೇಶನ: ಬಸನಗೌಡ ಯತ್ನಾಳ್ ಪ್ರಸ್ತಾಪಿಸಿದ್ದು ಉತ್ತಮ ಅಂಶವೇ; ಆದರೆ ಮೂದಲಿಸಿದ್ದು ಅಶೋಕ ಮತ್ತು ವಿಜಯೇಂದ್ರರನ್ನು!

|

Updated on: Dec 14, 2023 | 11:53 AM

ನಾಳೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಕೊನೆಗೊಳ್ಳುತ್ತದೆ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನ ಇನ್ನೂ ಕೊನೆಗೊಂಡಿಲ್ಲ. ಅಧಿವೇಶನದಲ್ಲಿ ಅವರು ಹೆಚ್ಚುಕಡಿಮೆ ಪ್ರತಿದಿನ ಅಶೋಕ, ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಟೀಕಿಸುತ್ತಾ ಮಾತಾಡಿದ್ದಾರೆ. ಸದನದ ಹೊರಗೆ ಅವರ ವರಾತ ಮತ್ತಷ್ಟು ಜೋರಾಗಿರುತ್ತದೆ. ರಾಜ್ಯಾಧ್ಯಕ್ಷರಿಗೆ ಕನಿಷ್ಟ ಒಂದು ನೋಟೀಸ್ ಕೊಡುವುದೂ ಆಗುತ್ತಿಲ್ಲವೇ?

ಬೆಳಗಾವಿ: ಇಂದು ಸುವರ್ಣ ಸೌಧದಲ್ಲಿ ವಿಧಾನಸಭಾ ಅಧಿವೇಶನ ಶುರುವಾಗುತ್ತಿದ್ದಂತೆಯೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  (Basangouda Patil Yatnal) ಮತ್ತೊಮ್ಮೆ ತಮ್ಮ ಪಕ್ಷದ ನಾಯಕರಾದ ಆರ್ ಆಶೋಕ (R Ashoka) ಮತ್ತು ಬಿವೈ ವಿಜಯೇಂದ್ರ (BY Vijayendra) ಅವರನ್ನು ಟಾರ್ಗೆಟ್ ಮಾಡಿದರು. ನಿನ್ನೆ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದ ಪೂರಕ ಬಜೆಟ್ ಅನ್ನು ಉಲ್ಲೇಖಿಸಿ ಯತ್ನಾಳ್, ಕಾಂಗ್ರೆಸ್ ನಾಯಕರು ಪ್ರತಿಯೊಂದು ವಿಷಯಕ್ಕೂ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡೋದು ಯಾಕೆ, ತಮ್ಮ ಪಕ್ಷದ ಜೋಡೆತ್ತುಗಳ ಬಗ್ಗೆ ಯಾಕೆ ಮಾತಾಡಲ್ಲ ಅಂತ ಕೇಳಿದರು. ಅಧಿವೇಶನಕ್ಕೆ ಮೊದಲು ವಿರೋಧ ಪಕ್ಷದ ನಾಯಕ ಅಶೋಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯ ಬಿಜೆಪಿ ಜೋಡೆತ್ತು ಅಂತ ಬಿಂಬಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯತ್ನಾಳ್ ಅವರು ಅಶೋಕ್ ಮತ್ತು ವಿಜಯೇಂದ್ರರನ್ನು ಮೂದಲಿಸಲು ಹಾಗೆ ಹೇಳಿದ್ದು ಅಂತ ಕೇವಲ ಅವರ ಪಕ್ಷದವರಿಗಲ್ಲ ಕಾಂಗ್ರೆಸ್ ಶಾಸಕರಿಗೂ ಮನದಟ್ಟಾಗಿತ್ತು.

ಅವರ ಆಕ್ಷೇಪಣೆಗೆ ಎದ್ದು ನಿಂತ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನು ಎದೆತಟ್ಟಿಕೊಂಡು ಹೇಳ್ತೀರಿ, ಬಾರದ ಅನುದಾನವನ್ನು ನಾವು ಪ್ರಶ್ನಿಸಬಾರದೆ ಅಂತ ಯತ್ನಾಳ್ ರನ್ನು ಕೇಳಿದರು. ಅವರ ಮಾತಿನ ನಂತರ ಸದನದಲ್ಲಿ ಗಲಾಟೆಯ ವಾತಾವರಣ ಸೃಷ್ಟಿಯಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on