ಕಲಬುರಗಿಯಲ್ಲಿ ಪತ್ರಕರ್ತರಿಗೆ ಬೈಟ್ ನೀಡುತ್ತಿದ್ದ ಡಿಸಿಎಂ ಶಿವಕುಮಾರ್ ಕರೆದರೂ ಸಿಎಂ ಸಿದ್ದರಾಮಯ್ಯ ಮುಗುಳ್ನಕ್ಕು ಮುಂದೆ ಹೋದರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2023 | 2:48 PM

ತಮ್ಮ ಮಾತು ಕೇಳುವುದು ಬಿಟ್ಟು ಪತ್ರಕರ್ತರು ಮುಖ್ಯಮಂತ್ರಿಯ ದುಂಬಾಲು ಬಿದ್ದಾಗ ಕೊಂಚ ಸಿಡಿಮಿಡಿಗೊಳ್ಳುವ ಶಿವಕುಮಾರ್ ಅದನ್ನು ತೋರ್ಪಡಿಸದೆ ಸರ್, ಬನ್ನಿ ಅಂತ ಸಿದ್ದರಾಮಯ್ಯರನ್ನು ಕರೆಯುತ್ತಾರೆ.

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರಾಂತ್ಯದ ಪ್ರಮುಖ ನಗರವಾಗಿರುವ ಕಲಬುರಗಿಯಲ್ಲಿ (Kalaburagi) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜೊತೆ ಹಲವಾರು ಸಚಿವರ ದಂಡು ಬಂದಿಳಿದಿದೆ. ಕಾರಣ ನಿಮಗೆ ಗೊತ್ತಿದೆ. ನಗರದ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಒಂದು ಸ್ವಾರಸ್ಯಕರ ಘಟನೆಯನ್ನು ಗಮನಿಸಿ. ಏರ್ಪೋರ್ಟ್ ನಿಂದ ಮೊದಲು ಹೊರಬಂದ ಶಿವಕುಮಾರ್ ಅವರನ್ನು ಮಾಧ್ಯಮದವರು ಸುತ್ತುವರೆಯುತ್ತಾರೆ. ಅವರು ಗೃಹ ಜ್ಯೋತಿ ಯೋಜನೆ ಬಗ್ಗೆ ಮಾತಾಡುತ್ತಿರುವಾಗಲೇ ಹೊರಬರುವ ಸಿದ್ದರಾಮಯ್ಯ, ಶಿವಕುಮಾರ್ ಪತ್ರಕರ್ತರ ಜತೆ ಮಾತಾಡುತ್ತಿರುವುದನ್ನು ಓರೆಗಣ್ಣಿನಿಂದ ನೋಡಿ ಮುಂದೆ ಸಾಗುತ್ತಾರೆ. ಆದರೆ ಸುದ್ದಿಗಾರರು ಸರ್, ನೀವೂ ಬನ್ನಿ ಅಂತ ಕರೆಯುತ್ತಾರೆ. ಆದರೆ ಮುಖ್ಯಮಂತ್ರಿ, ಶಿವಕುಮಾರ್ ಕಡೆ ಕೈ ತೋರಿಸುತ್ತಾ ಅವರೇ ಮಾತಾಡುತ್ತಾರೆ ಅನ್ನುತ್ತಾರೆ. ತಮ್ಮ ಮಾತು ಕೇಳುವುದು ಬಿಟ್ಟು ಪತ್ರಕರ್ತರು ಮುಖ್ಯಮಂತ್ರಿ ದುಂಬಾಲು ಬಿದ್ದಾಗ ಕೊಂಚ ಸಿಡಿಮಿಡಿಗೊಳ್ಳುವ ಶಿವಕುಮಾರ್ ಅದನ್ನು ತೋರ್ಪಡಿಸದೆ ಸರ್, ಬನ್ನಿ ಅಂತ ಕರೆಯುತ್ತಾರೆ. ಸಿಎಂ ಒಂದರೆಕ್ಷಣ ನಿಂತರೂ, ನೀವೇ ಮಾತಾಡಿ ಅನ್ನುತ್ತಾ ಮುಂದೆ ಹೋಗುತ್ತಾರೆ. ಕೊನೆಗೆ ಶಿವಕುಮಾರ್, ‘ಬರ್ತಾರೆ, ನಾನು ಹೇಳುತ್ತಿರೋದನ್ನು ಕೇಳಿಸಿಕೊಳ್ಳಿ,’ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.