ದಿಢೀರ್ ದೆಹಲಿಗೆ ದೌಡಾಯಿಸಿದ ಡಿಕೆಶಿ: ರಾಹುಲ್ ಗಾಂಧಿ ಜೊತೆ ಪ್ರತ್ಯೇಕ ಮಾತುಕತೆಗೆ ನಿರ್ಧಾರ
ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ನವೆಂಬರ್ 11ರಂದು ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಈ ಭೇಟಿಯು ಅಧಿಕಾರ ಹಂಚಿಕೆ ಮತ್ತು ರಾಜ್ಯ ರಾಜಕಾರಣದ ಭವಿಷ್ಯದ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಲಿದೆ. ನವೆಂಬರ್ ತಿಂಗಳು ಕಾಂಗ್ರೆಸ್ನಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗುತ್ತಿರುವ ಸಂದರ್ಭದಲ್ಲೇ, ಹೈಕಮಾಂಡ್ ಭೇಟಿಗೆ ತೆರಳಲ್ಲ ಎನ್ನುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಭಾನುವಾರ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ನ.11ರಂದು ಮತ್ತೆ ದೆಹಲಿಗೆ ತೆರಳಲಿದ್ದು, ರಾಹುಲ್ ಗಾಂಧಿ ಜತೆ ಪ್ರತ್ಯೇಕ ಮಾತುಕತೆಗೆ ಸಮಯ ಕೇಳಿದ್ದಾರೆ. ಆ ಭೇಟಿಯ ವೇಳೆ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಅಧಿಕಾರ ಹಂಚಿಕೆ, ಮುಂದಿನ ರಾಜಕೀಯ ಭವಿಷ್ಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನ.11ಕ್ಕೆ ಬಿಹಾರ ಚುನಾವಣೆ 2ನೇ ಹಂತದ ಮತದಾನ ಸಹ ಅಂತ್ಯವಾಗಲಿದೆ. ಅಲ್ಲಿವರೆಗೆ ಮೌನದಿಂದ ಇರಿ ಎಂದು ಬೆಂಬಲಿಗರಿಗೂ ಡಿಕೆ ಶಿವಕಮಾರ್ ಸೂಚಿಸಿದ್ದಾರೆ. ಹೀಗಾಗಿ ಡಿಕೆ ಶಿವಕಮಾರ್ ನವೆಂಬರ್ 11ರ ದೆಹಲಿ ಪ್ರವಾಸ ಕುತೂಹಲ ಮೂಡಿಸಿದೆ.
