ರಸ್ತೆ, ಚರಂಡಿ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ? ಚರ್ಚೆಗೆ ಗ್ರಾಸವಾದ ಪರಮೇಶ್ವರ್ ಹೇಳಿಕೆ

Updated on: Dec 15, 2025 | 9:33 AM

ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಸ್ತೆ-ಚರಂಡಿ ನಿರ್ಮಾಣದಿಂದ ಜನ ಉದ್ದಾರ ಆಗ್ತಾರಾ ಎಂದು ಪ್ರಶ್ನಿಸಿದ್ದಾರೆ. 58 ಸಾವಿರ ಕೋಟಿ ರೂಪಾಯಿ ವೆಚ್ಚದ ಗ್ಯಾರಂಟಿ ಯೋಜನೆಗಳು ಬಡವರ ಶೋಷಣೆ ನಿಲ್ಲಿಸಲು ಮುಖ್ಯವೆಂದು ಅವರು ಸಮರ್ಥಿಸಿಕೊಂಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ನಿಧಾನವಾದರೂ ನಿಲ್ಲುವುದಿಲ್ಲ, ಆದರೆ ಮಾನವನ ಜೀವನದ ಸುಧಾರಣೆಯೇ ಪ್ರಮುಖ ಗುರಿ ಎಂದರು.

ತುಮಕೂರು, ಡಿಸೆಂಬರ್ 15: ರಸ್ತೆ, ಚರಂಡಿ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಭಾನುವಾರ ನಡೆದ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಸ್ತೆ ಮತ್ತು ಚರಂಡಿಗಳ ನಿರ್ಮಾಣದಿಂದ ಜನಸಮೂಹ ನಿಜವಾಗಿಯೂ ಉದ್ದಾರವಾಗುತ್ತದೆಯೇ? ಬಡವರ ಜೀವನ ಉದ್ದಾರವಾಗುತ್ತದೆಯೇ ಎಂದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ವರ್ಷಕ್ಕೆ 58 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಳನ್ನು ನಿಲ್ಲಿಸಿದರೆ ಬಡವರ ಬದುಕು ಸುಧಾರಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ರಸ್ತೆ, ಚರಂಡಿ ಅಥವಾ ಇನ್ನಿತರ ಕಾರ್ಯಕ್ರಮಗಳಿಂದ ಮಾತ್ರ ಬಡವರ ಜೀವನದಲ್ಲಿ ಬದಲಾವಣೆ ಬರುವುದಿಲ್ಲ. ಸಾವಿರಾರು ವರ್ಷಗಳ ಶೋಷಣೆಯನ್ನು ಕೊನೆಗಾಣಿಸುವುದು ಮತ್ತು ಜನರ ಜೀವನವನ್ನು ಸುಧಾರಿಸುವುದೇ ಗ್ಯಾರಂಟಿ ಯೋಜನೆಗಳ ಮುಖ್ಯ ಉದ್ದೇಶ. ನಾವು ರಸ್ತೆ, ಮನೆ ನಿರ್ಮಾಣ ಅಥವಾ ನೀರಾವರಿ ಯೋಜನೆಗಳನ್ನು ನಿಲ್ಲಿಸಿಲ್ಲ, ಅವು ನಿಧಾನವಾಗಿರಬಹುದು. ಆದರೆ ಅವು ಎಂದಿಗೂ ನಿಲ್ಲುವುದಿಲ್ಲ. ಜನರ ಜೀವನ ಉತ್ತಮಗೊಳ್ಳಬೇಕು ಮತ್ತು ಸುಧಾರಣೆಯಾಗಬೇಕು ಎಂಬ ದೃಷ್ಟಿಯಿಂದಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 15, 2025 08:58 AM