‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆ ಬಂದ್ ಆಗುತ್ತಾ? ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ

Updated on: Oct 07, 2025 | 5:24 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಸಂಕಷ್ಟ ಎದುರಾಗಿದೆ. ‘ವೇಲ್ಸ್​ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್’ ಕಂಪನಿಗೆ ಜಾಲಿವುಡ್ ಸೇರಿದೆ. ಆ ಕಂಪನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್​ ನೀಡಲಾಗಿದೆ. ಈ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಬಂದ್ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ, ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ. ಈ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿಕೆ ನೀಡಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ‘ರಾಮನಗರದ ಅಧಿಕಾರಿಗಳು ಹಿಂದೆಯೇ ನೋಟಿಸ್​ ಕೊಟ್ಟಿದ್ದಾರೆ. 2024ರ ಮಾರ್ಚ್​ನಲ್ಲೇ ನೋಟಿಸ್​ ನೀಡಲಾಗಿತ್ತು. ಪರಿಶೀಲನೆ ವೇಳೆ ಪರವಾನಗಿ ಪಡೆದಿಲ್ಲ ಎಂಬ ಮಾಹಿತಿ ಬಂದಿದೆ. ಸ್ಟುಡಿಯೋದವರು ಪರವಾನಗಿ ಪಡೆದಿಲ್ಲ, ಅರ್ಜಿಯನ್ನೂ ಹಾಕಿಲ್ಲ. ನೋಟಿಸ್​ ಕೊಟ್ಟರೂ ಅಮ್ಯೂಸ್​ಮೆಂಟ್​ ಪಾರ್ಕ್ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಕೋರ್ಟ್ ಮೊರೆ ಹೋಗಲು ಎಲ್ಲರಿಗೂ ಅವಕಾಶ ಇದೆ. ಕಾನೂನು ರೀತಿ ಏನು ಕ್ರಮ ವಹಿಸಬೇಕೋ ಅದನ್ನು ವಹಿಸಲಿ’ ಎಂದಿದ್ದಾರೆ ಸಚಿವ ಈಶ್ವರ ಖಂಡ್ರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us