ಹಾಸನ, ಜು.2: ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಿನ್ನೆ ಸಂಜೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ವೇಳೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕ ಎಚ್.ಕೆ. ಸುರೇಶ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಯೋಜನೆಗೆ ಭೂಮಿ ನೀಡಿದ ರೈತರಿಗೆ 28 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಈ ವಾಗ್ವಾದ ಪ್ರಾರಂಭವಾಯಿತು. ರೈತರು ತಮ್ಮ ಪರಿಹಾರಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದ ವೇಳೆ, “ನಾನೇ 28 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ” ಎಂದು ಶಾಸಕ ಶಿವಲಿಂಗೇಗೌಡರು ಹೇಳಿಕೊಂಡರು. ಇದರಿಂದ ಕೆರಳಿದ ಶಾಸಕ ಸುರೇಶ್, ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. 28 ಕೋಟಿ ರೂ. ಪರಿಹಾರ ಹಣ ಸಿದ್ಧವಿದ್ದು, 10 ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ 69/103 ಜನರಿಗೆ ಪರಿಹಾರ ನೀಡಿ ಕಾಮಗಾರಿ ಶುರು ಮಾಡುವ ಬಗ್ಗೆ ಭರವಸೆ ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಪರಿಹಾರ ಪಾವತಿ ಪ್ರಕ್ರಿಯೆ ನಡೆಯಲಿದೆ. ಪರಿಹಾರ ನೀಡದೆ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ರೈತರಿಗೆ ಭರವಸೆ ನೀಡಲಾಗಿದ್ದರೂ, ಶಾಸಕರ ನಡುವಿನ ವಾಗ್ವಾದ ಸಭೆಯ ವಾತಾವರಣವನ್ನು ಬಿಸಿ ಮಾಡಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ