ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ

Updated on: Jun 09, 2025 | 10:31 PM

ಕೇರಳದ ಕರಾವಳಿಯಲ್ಲಿ ಸಿಂಗಾಪುರದ ಧ್ವಜವಿದ್ದ ಕಂಟೇನರ್ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 4 ಮಂದಿ ಕಾಣೆಯಾಗಿದ್ದಾರೆ. ಇಂದು ಕೇರಳ ಕರಾವಳಿಯಲ್ಲಿ ಕಂಟೇನರ್ ಸ್ಫೋಟದ ನಂತರ ಸಿಂಗಾಪುರ ಮೂಲದ ನಡೆಸುತ್ತಿದ್ದ ಹಡಗಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ದೃಶ್ಯವನ್ನು ವಿಮಾನದಲ್ಲಿ ತೆರಳುತ್ತಿದ್ದವರು ರೆಕಾರ್ಡ್ ಮಾಡಿದ್ದಾರೆ. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆತರಲಾಗಿದೆ ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊಚ್ಚಿ, ಜೂನ್ 9: ಕೇರಳದ ಕರಾವಳಿಯಲ್ಲಿ ಇಂದು ಕಂಟೇನರ್ ಸ್ಫೋಟ ಉಂಟಾಗಿದೆ. ಸಿಂಗಾಪುರದ ಧ್ವಜವಿದ್ದ ಹಡಗಿನಲ್ಲಿ ಭಾರಿ ಬೆಂಕಿ ಅವಘಡ (Fire Accident) ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ವಿಷಯ ತಿಳಿಯುತ್ತಿದ್ದಂತೆ 18 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಕೇರಳದ (Kerala) ಕಣ್ಣೂರು ಜಿಲ್ಲೆಯ ಅಝಿಕ್ಕಲ್ ಮತ್ತು ಕೊಚ್ಚಿಯ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ. ಸಿಂಗಾಪುರ ಮೂಲದ ಕಂಟೇನರ್ ಹಡಗಿನ ಎಂವಿ ವಾನ್ ಹೈ 503ನಲ್ಲಿದ್ದ 22 ಸಿಬ್ಬಂದಿಗಳಲ್ಲಿ ಹಡಗಿನಿಂದ ಸಮುದ್ರಕ್ಕೆ ಹಾರಿದ 18 ಮಂದಿಯನ್ನು ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳು ರಕ್ಷಿಸಿವೆ ಎಂದು ನೌಕಾ ಪಡೆಯ ಮೂಲಗಳು ತಿಳಿಸಿವೆ.

ಸಮುದ್ರದ ಮಧ್ಯೆ ಹಡಗಿನ ಮಧ್ಯಭಾಗವನ್ನು ಬೆಂಕಿ ವೇಗವಾಗಿ ಆವರಿಸಿತು. ಆ ಹಡಗು ಇನ್ನೂ ಹೊತ್ತಿ ಉರಿಯುತ್ತಲೇ ಇದೆ. ಪ್ರಾಥಮಿಕ ವರದಿಗಳ ಪ್ರಕಾರ 10-15 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿವೆ ಎಂದು ಕೋಸ್ಟ್ ಗಾರ್ಡ್ ಪ್ರಕಟಣೆ ತಿಳಿಸಿದೆ. ಈ ಹಡಗಿನಲ್ಲಿ 8 ಚೀನೀ, 6 ಥೈವಾನೀಸ್, 5 ಮ್ಯಾನ್ಮಾರ್ ಮತ್ತು 3 ಇಂಡೋನೇಷ್ಯಾ ಪ್ರಜೆಗಳು ಸೇರಿದಂತೆ 22 ಸಿಬ್ಬಂದಿ ಇದ್ದರು. ಸ್ಫೋಟದ ನಂತರ ಹಡಗಿನ ಸಿಬ್ಬಂದಿ ಕೆಳಗೆ ಹಾರಿದರು. 18 ಸಿಬ್ಬಂದಿಯನ್ನು ರಕ್ಷಿಸಲಾಗಿದೆ, ಆದರೆ ನಾಲ್ವರು ಕಾಣೆಯಾಗಿದ್ದಾರೆ. ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More