ಕರ್ನಾಟಕದಲ್ಲಿರೋದು ಜನರ ಬಗ್ಗೆ ಕಾಳಜಿಯಿಲ್ಲದ ಲೂಟಿಕೋರ, ಭ್ರಷ್ಟ ಸರ್ಕಾರ: ಪ್ರಧಾನಿ ನರೇಂದ್ರ ಮೋದಿ

|

Updated on: Mar 18, 2024 | 5:40 PM

ಪ್ರತಿ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಭರವಸೆ ನೀಡುವುದನ್ನು ಕಾಂಗ್ರೆಸ್ ಕಾಯಕವಾಗಿಸಿಕೊಂಡಿದೆ, ಅದರ ಮನಸ್ಥಿತಿಯೇ ಹಾಗೆ, ಜನರ ಪರವಾಗಿ ಅದು ಯಾವತ್ತೂ ಯೋಚನೆ ಮಾಡಲ್ಲ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಮಾಡಿ ತನ್ನ ಜೇಬು ತುಂಬಿಸಿಕೊಳ್ಳುವುದೊಂದೇ ಅದಕ್ಕೆ ಗೊತ್ತಿರೋದು ಎಂದು ಪ್ರಧಾನಿ ಹೇಳಿದರು.

ಶಿವಮೊಗ್ಗ: ನಗರದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ ಬಿಜೆಪಿ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ (Viksit Bharat Sankalp Convention) ಮಾತಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು (Karnataka government), ಅಸಮರ್ಥ, ಹೊಣೆಗೇಡಿ ಮತ್ತು ಲೂಟಿ ಸರ್ಕಾರ ಎಂದು ಜರಿದರು. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಹೇಳಿದ ಸುಳ್ಳುಗಳನ್ನು ಮುಚ್ಚಿಹಾಕಲು ಹೊಸ ಸುಳ್ಳುಗಳನ್ನು ಹೇಳುತ್ತಿದೆ, ತನ್ನ ಅಸಾಮರ್ಥ್ಯಕ್ಕಾಗಿ ಕೇಂದ್ರ ಸರ್ಕಾರವನ್ನು ದೂರುತ್ತದೆ ಇಲ್ಲವೇ ತನ್ನ ಮೇಲೆ ಆರೋಪ ಹೊರಿಸುತ್ತದೆ ಎಂದು ಮೋದಿ ಹೇಳಿದರು. ಪ್ರತಿ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಭರವಸೆ ನೀಡುವುದನ್ನು ಕಾಂಗ್ರೆಸ್ ಕಾಯಕವಾಗಿಸಿಕೊಂಡಿದೆ, ಅದರ ಮನಸ್ಥಿತಿಯೇ ಹಾಗೆ, ಜನರ ಪರವಾಗಿ ಅದು ಯಾವತ್ತೂ ಯೋಚನೆ ಮಾಡಲ್ಲ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಮಾಡಿ ತನ್ನ ಜೇಬು ತುಂಬಿಸಿಕೊಳ್ಳುವುದೊಂದೇ ಅದಕ್ಕೆ ಗೊತ್ತಿರೋದು ಎಂದು ಪ್ರಧಾನಿ ಹೇಳಿದರು.

ಕರ್ನಾಟಕಲ್ಲಿರುವ ಕಾಂಗ್ರೆಸ್ ಸರ್ಕಾರ ಯಾವಪರಿ ಲೂಟಿ ಮಾಡಿದೆಯೆಂದರೆ ಅಡಳಿತ ನಡೆಸಲು ಖಜಾನೆಯಲ್ಲಿ ದುಡ್ಡೇ ಇಲ್ಲ. ಈ ಲೂಟಿಯಲ್ಲಿ ಪಾಲುದಾರರಾಗಲು, ಪಕ್ಷದ ನಾಯಕರು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ, ಇಲ್ಲೊಬ್ಬರು ಸಿಎಂ ಆಗಲು ವೇಟಿಂಗ್ ನಲ್ಲಿದ್ದರೆ, ಇನ್ನೊಬ್ಬರು ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಾರೆ, ಮತ್ತೊಬ್ಬ ಸೂಪರ್ ಸಿಎಂ ಮಗದೊಬ್ಬ ಶ್ಯಾಡೋ ಸಿಎಂ; ಇವೆರೆಲ್ಲರ ಮೇಲೆ ದೆಹಲಿಯಲ್ಲಿ ಒಬ್ಬ ಕಲೆಕ್ಷನ್ ಮಂತ್ರಿ ಕೂತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸರ್ಕಾರ ಜನರ ವಿಶ್ವಸಕ್ಕೆ ಧಕ್ಕೆಯುಂಟು ಮಾಡಿದೆ, ಸರ್ಕಾರದ ವಿರುದ್ಧ ಜನರ ಆಕ್ರೋಶ ಮತ್ತು ಅಸಹನೆ ತಮಗೆ ಸ್ಪಷ್ಟವಾಗಿ ಕಾಣುತ್ತಿದೆ ಎಂದ ಪ್ರಧಾನಿ ಮೋದಿ, ಈ ಹಿನ್ನೆಲೆಯಲ್ಲೇ ಕರ್ನಾಟಕ ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಲಬುರಗಿ ಬಿಜೆಪಿ ಸಂಕಲ್ಪ ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನಡುವೆ ಆಪ್ತ ಮಾತುಕತೆ!

Follow us on