ಬೆಂಗಳೂರು: ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್ ಪೀಸ್

Updated on: Dec 29, 2025 | 10:25 AM

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ವೆಂಕಟೇಶ್ ಗ್ಯಾಂಗ್ ಬಷೀರ್ ಮತ್ತು ಆತನ ಸ್ನೇಹಿತನ ಕಾರು ಹಾಗೂ ಪಾನ್ ಅಂಗಡಿ ಮೇಲೆ ದಾಳಿ ನಡೆಸಿದೆ. ಘಟನೆ ಸಂಬಂಧ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನ ಕತ್ರಿಗುಪ್ಪೆ ಪ್ರದೇಶದಲ್ಲಿ ಇಬ್ಬರು ಯುವಕರ ಮೇಲೆ ಲಾಂಗು ಮಚ್ಚುಗಳಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಬಷೀರ್ ಮತ್ತು ಆತನ ಸ್ನೇಹಿತ ಟೀ ಅಂಗಡಿಯ ಬಳಿ ಇದ್ದಾಗ, ವೆಂಕಟೇಶ್ ಎಂಬಾತನ ನೇತೃತ್ವದ ಏಳರಿಂದ ಎಂಟು ಜನರ ಗ್ಯಾಂಗ್ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರೂ ಕಾರಿನಲ್ಲಿ ಅಡಗಿಕೊಂಡಿದ್ದಾರೆ. ಆದರೆ, ಗ್ಯಾಂಗ್ ಲಾಂಗು, ಮಚ್ಚು ಮತ್ತು ಕಲ್ಲುಗಳಿಂದ ಕಾರಿನ ಮೇಲೆ ಹಲ್ಲೆ ನಡೆಸಿದೆ. ನಂತರ ಯುವಕರು ಕಾರಿನಿಂದ ತಪ್ಪಿಸಿಕೊಂಡು ಮುಖ್ಯ ರಸ್ತೆಯಲ್ಲಿದ್ದ ಪಾನ್ ಅಂಗಡಿಯಲ್ಲಿ ಅಡಗಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಪಾನ್ ಅಂಗಡಿಯ ಮೇಲೂ ದಾಳಿ ನಡೆಸಿ, ಗಾಜುಗಳನ್ನು ಪುಡಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ.

ಈ ಘಟನೆ ಬಷೀರ್ ಮತ್ತು ವೆಂಕಟೇಶ್ ನಡುವಿನ ಹಳೆಯ ದ್ವೇಷದ ಪರಿಣಾಮ ಎಂದು ತಿಳಿದುಬಂದಿದೆ. ಹಿಂದೆ ಈ ಕುರಿತು ದೂರು ಮತ್ತು ಪ್ರತಿದೂರು ಕೂಡ ದಾಖಲಾಗಿತ್ತು. ಘಟನೆಯಿಂದ ಏರಿಯಾದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us