ಬೆಳಗಾವಿ, ಹಾವೇರಿಯಲ್ಲಿ ಧಾರಾಕಾರ ಮಳೆ: ನದಿಯಂತಾದ ರಸ್ತೆಗಳು, ಬೈಕ್​ಗಳು ಮುಳುಗಡೆ

Updated on: Mar 25, 2026 | 6:26 AM

ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಕಡೇಬಜಾರ್ ಮಾರುಕಟ್ಟೆ ಜಲಾವೃತಗೊಂಡು ವ್ಯಾಪಾರಸ್ಥರು ಪರದಾಡಿದ್ದಾರೆ. ಹಾವೇರಿ ಜಿಲ್ಲೆಯ ಕರ್ಜಗಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸಂತೆಯಲ್ಲಿದ್ದ ತರಕಾರಿಗಳು ಕೊಚ್ಚಿ ಹೋಗಿದ್ದು, ರೈತರಿಗೆ ಭಾರಿ ನಷ್ಟವಾಗಿದೆ.

ಬೆಳಗಾವಿ, ಹಾವೇರಿ, ಮಾರ್ಚ್ 25: ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಡೇಬಜಾರ್ ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಏಕಾಏಕಿ ಬಂದ ಮಳೆಯಿಂದಾಗಿ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ತರಕಾರಿ ವ್ಯಾಪಾರಸ್ಥರು ತರಕಾರಿಗಳನ್ನು ಬಿಟ್ಟು ಮನೆಗೆ ತೆರಳಬೇಕಾಯಿತು. ಪೋರ್ಟ್ ರಸ್ತೆಯಲ್ಲಿನ ಅಂಗಡಿಗಳಿಗೂ ಚರಂಡಿ ನೀರು ನುಗ್ಗಿದ್ದು, ವ್ಯಾಪಾರಸ್ಥರು ಪರದಾಡಿದ್ದಾರೆ. ನಗರದ ರಸ್ತೆಗಳು ನದಿಯಂತೆ ಮಾರ್ಪಟ್ಟಿದ್ದು, ಹಲವು ಬೈಕ್​ಗಳು ಮುಳುಗಡೆಯಾಗಿವೆ. ಅಕಾಲಿಕ ಮಳೆಯಿಂದ ಬೆಳಗಾವಿ ನಗರ ನಿವಾಸಿಗಳು ತೀವ್ರ ತೊಂದರೆಗೊಳಗಾಗಿದ್ದಾರೆ.

ಇದೇ ರೀತಿ, ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಭಾರಿ ಅನಾಹುತಕ್ಕೆ ಕಾರಣವಾಗಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಮಳೆಯ ರಭಸಕ್ಕೆ ಸಂತೆಯಲ್ಲಿದ್ದ ಬದನೆಕಾಯಿ, ಟೊಮ್ಯಾಟೊ ಸೇರಿದಂತೆ ಹಲವು ತರಕಾರಿಗಳು ಕೊಚ್ಚಿ ಹೋಗಿ ನಾಶವಾಗಿವೆ. ರಸ್ತೆಗಳಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಮತ್ತು ತರಕಾರಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ರಕ್ಷಿಸಲು ಪರದಾಡಬೇಕಾಯಿತು. ಮಳೆಯಿಂದಾಗಿ ಹಾವೇರಿಯಲ್ಲಿಯೂ ಜನಜೀವನಕ್ಕೆ ಅಡ್ಡಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More