ಟ್ರ್ಯಾಕ್ಟರ್ ಬಾಡಿಗೆ ಹೆಚ್ಚು: ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!

Edited By:

Updated on: Jun 22, 2026 | 12:44 PM

ಧಾರವಾಡ ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಮಾಡಿದ ರೈತರು ಮಳೆಗಾಗಿ ಕಾಯುತ್ತಿದ್ದರೆ, ಕೆಲವರಿಗೆ ಬಿತ್ತನೆ ಮಾಡಲು ಆಗಿಲ್ಲ. ಎತ್ತುಗಳು ಮತ್ತು ಟ್ರ್ಯಾಕ್ಟರ್‌ಗಳ ದುಬಾರಿ ವೆಚ್ಚದಿಂದಾಗಿ, ರೈತ ಕುಟುಂಬಸ್ಥರೇ ನೊಗಕ್ಕೆ ಹೆಗಲು ಕೊಟ್ಟು ಭೂಮಿ ಉಳುಮೆ ಮಾಡುತ್ತಿದ್ದಾರೆ. ಬೆಳೆ ನಷ್ಟದ ಭೀತಿಯಲ್ಲಿ ಎದುರಿಸುತ್ತಿದ್ದಾರೆ.

ಹುಬ್ಬಳ್ಳಿ, ಜೂನ್ 22: ಧಾರವಾಡ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಮಳೆ ಸುರಿಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದಲ್ಲಿ ಬಿತ್ತನೆ ಕಾರ್ಯ ನಡೆಸಿದ್ದ ರೈತರು ಇದೀಗ ಮಳೆಗಾಗಿ ನಿರೀಕ್ಷೆಯಲ್ಲಿದ್ದಾರೆ. ಆದರೆ ನಿರಂತರ ಬರದಿಂದಾಗಿ ಬಿತ್ತಿದ ಬೀಜ ಮೊಳಕೆಯೊಡೆಯದೆ ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಕೃಷಿ ಕಾರ್ಯಗಳಿಗೆ ಎತ್ತುಗಳನ್ನು ಖರೀದಿಸುವುದು ದುಬಾರಿಯಾಗಿದ್ದು, ಒಂದು ಜೊತೆ ಎತ್ತುಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಇನ್ನು ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ಮಾಡಿಸುವುದು ಕೂಡ ಪ್ರತಿ ಎಕರೆಗೆ 1,500 ರಿಂದ 2,000 ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಈ ಹೆಚ್ಚಿದ ವೆಚ್ಚ ಮತ್ತು ಮಳೆ ಇಲ್ಲದ ಕಾರಣದಿಂದಾಗಿ ರೈತರು ಆರ್ಥಿಕವಾಗಿ ಬಸವಳಿದಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವ ಕಾರಣ, ಕುಟುಂಬದ ಸದಸ್ಯರೇ ನೊಗಕ್ಕೆ ಹೆಗಲು ಕೊಟ್ಟು ತಮ್ಮ ಜಮೀನುಗಳನ್ನು ಉಳುಮೆ ಮಾಡುತ್ತಿದ್ದಾರೆ. ಮಳೆ ಇಲ್ಲದೆ ಬೆಳೆ ಹಾಳಾಗುತ್ತಿರುವುದರಿಂದ ಪ್ರತಿ ಎಕರೆಗೆ 30,000 ರಿಂದ 40,000 ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us