ಸೌಹಾರ್ದತೆಗೆ ಸಾಕ್ಷಿಯಾದ ಅಪರೂಪದ ಘಟನೆ; ಮುಸ್ಲಿಮರಿಗೆ ತಂಪು ಪಾನೀಯ ಹಂಚಿದ ಹಿಂದೂ ಯುವಕರು!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯಲ್ಲಿ ಅಪರೂಪದ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ವಿನಾಯಕ ವೃತ್ತದಲ್ಲಿ ಹಿಂದೂ ಯುವಕರು ತಂಪು ಪಾನೀಯ ಮತ್ತು ಕೇಕ್ ವಿತರಿಸಿ ಭವ್ಯವಾಗಿ ಸ್ವಾಗತಿಸಿದರು. ಪರಸ್ಪರ ಕೈಕುಲುಕಿ, ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ "ಧರ್ಮ ಯಾವುದಾದರೂ ನಾವೆಲ್ಲರೂ ಒಂದೇ" ಎಂಬ ಸುಂದರ ಮಾನವೀಯ ಸಂದೇಶವನ್ನು ರಿಪ್ಪನ್ಪೇಟೆಯ ಜನರು ಇಡೀ ಸಮಾಜಕ್ಕೆ ಸಾರಿದ್ದಾರೆ.
ಶಿವಮೊಗ್ಗ, ಸೆಪ್ಟೆಂಬರ್ 07: ಜಿಲ್ಲೆಯ ರಿಪ್ಪನ್ಪೇಟೆಯಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾಗುವ ಅಪರೂಪದ ಹಾಗೂ ಭಾವುಕ ಘಟನೆಯೊಂದು ನಡೆದಿದೆ. ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆಯ ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂಧವರಿಗೆ ಹಿಂದೂ ಯುವಕರು ತಂಪು ಪಾನೀಯ ಹಾಗೂ ಕೇಕ್ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ. ಪಟ್ಟಣದ ವಿನಾಯಕ ವೃತ್ತದಲ್ಲಿ ಕಾದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು, ಮೆರವಣಿಗೆಯಲ್ಲಿದ್ದ ಸಹೋದರರನ್ನು ಪ್ರೀತಿಯಿಂದ ಸ್ವಾಗತಿಸಿ ಸ್ವಹಸ್ತದಿಂದ ಸಿಹಿ ನೀಡಿದರು. ಈ ಮಾನವೀಯ ಕಾರ್ಯಕ್ರಮಕ್ಕೆ ಹೊಸನಗರ ಸಿಪಿಐ ಗೌಡಪ್ಪಗೌಡರ್ ಚಾಲನೆ ನೀಡಿದರು.
ಹಿಂದೂ ಯುವಕರ ಈ ಅನಿರೀಕ್ಷಿತ ಪ್ರೀತಿಯಿಂದ ಭಾವುಕರಾದ ಮುಸ್ಲಿಂ ಬಾಂಧವರು, ಅವರನ್ನು ಆಲಂಗಿಸಿ ಕೃತಜ್ಞತೆ ಸಲ್ಲಿಸಿದರು. ಮಾಜಿ ಗ್ರಾ.ಪಂ. ಸದಸ್ಯ ನಿರೂಪ್ ಕುಮಾರ್, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ ಹಾಗೂ ಪಿಎಸ್ ಐ ರಾಜು ರೆಡ್ಡಿ ಭಾಗವಹಿಸಿ “ಧರ್ಮ ಯಾವುದಾದರೂ ನಾವೆಲ್ಲರೂ ಒಂದೇ” ಎಂಬ ಮಾನವೀಯ ಸಂದೇಶ ಸಾರಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.