ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ

Edited By:

Updated on: Apr 27, 2026 | 11:03 AM

ಕರ್ನಾಟಕದಲ್ಲಿ ತೀವ್ರ ಬಿಸಿಲು ಹಾಗೂ ಉಷ್ಣ ಅಲೆಯ ಕಾರಣ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಹುಬ್ಬಳ್ಳಿ-ಧಾರವಾಡದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಸೇರಿದಂತೆ ಹಲವೆಡೆ ಪ್ರತಿದಿನದ ಸಂಗ್ರಹ ಕುಸಿದಿದ್ದು, ರಕ್ತದ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ದಾನಿಗಳು ಧೈರ್ಯವಾಗಿ ರಕ್ತದಾನ ಮಾಡುವಂತೆ ಮನವಿ ಮಾಡಲಾಗಿದೆ. ವಿವರಗಳು ಇಲ್ಲಿವೆ.

ಹುಬ್ಬಳ್ಳಿ, ಏಪ್ರಿಲ್ 27: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪ ಜನಜೀವನವನ್ನು ತತ್ತರಿಸಿಸಿದೆ. ಇದರ ಪರಿಣಾಮವಾಗಿ, ರಾಜ್ಯದ ಹಲವು ರಕ್ತ ನಿಧಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ತಾಪಮಾನ ಏರಿಕೆಯಿಂದಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಹಿಂದೇಟು ಹಾಕುತ್ತಿದ್ದಾರೆ. ಹುಬ್ಬಳ್ಳಿ ನಗರದ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಲ್ಲಿ ಪ್ರತಿದಿನ 90 ರಿಂದ 100 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ, ಪ್ರಸ್ತುತ ಬೇಸಿಗೆಯ ಹಿನ್ನೆಲೆಯಲ್ಲಿ ಈ ಸಂಖ್ಯೆ 10 ರಿಂದ 15 ಯೂನಿಟ್‌ಗಳಿಗೆ ಕುಸಿದಿದೆ. ಬಿಸಿಲಿನಲ್ಲಿ ಸುಸ್ತು, ತಲೆಸುತ್ತು ಬರುವ ಸಾಧ್ಯತೆಗಳ ಭಯದಿಂದ ದಾನಿಗಳು ಹಿಂಜರಿಯುತ್ತಿದ್ದಾರೆ. ರೋಗಿಗಳಿಗೆ ರಕ್ತದ ಬೇಡಿಕೆ ಹೆಚ್ಚಾಗಿದ್ದರೂ, ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ.

ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕಿನ ಟ್ರಸ್ಟಿಗಳ ಪ್ರಕಾರ, ರಕ್ತದಾನ ಮಾಡಿದ ನಂತರ ಒಂದು ಗಂಟೆ ವಿಶ್ರಾಂತಿ ಪಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಿಸಿಲಿದ್ದರೂ ರಕ್ತದಾನ ಮಾಡುವುದು ಸುರಕ್ಷಿತವಾಗಿದ್ದು, ಕೇವಲ ವಿಶ್ರಾಂತಿ ಪಡೆಯುವುದು ಅವಶ್ಯಕ ಎಂದು ತಿಳಿಸಲಾಗಿದೆ. ಹೀಗಾಗಿ, ದಾನಿಗಳು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಲು ಸಹಾಯ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us