ದೇವೇಗೌಡರ ಹಾಗೆ ಅದೃಷ್ಟ ಮತ್ತು ಅವಕಾಶ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ಹೆಚ್ ವಿಶ್ವನಾಥ್

|

Updated on: Oct 02, 2023 | 7:17 PM

ದೇಶದಾದ್ಯಾಂತ ಹಬ್ಬಿರುವ ಹಲವಾರು ಕುರುಬ ನಾಯಕರು ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚಿನ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು. ಸಿದ್ದರಾಮಯ್ಯರಲ್ಲಿ ಪ್ರಧಾನ ಮಂತ್ರಿಯಾಗುವ ಯೋಗ್ಯತೆ, ಕ್ಷಮತೆ, ಮುತ್ಸದ್ದಿತನ ಮತ್ತ್ತು ಎಲ್ಲಕ್ಕೂ ಮಿಗಿಲಾಗಿ ರಾಜಕೀಯ ಅನುಭವ ಇದೆ ಎಂದು ಅವರು ಹೇಳಿದರು.

ಬೆಳಗಾವಿ: ನಗರದಲ್ಲಿ ಕುರುಬ ಸಮುದಾಯದ 9ನೇ ಅಧಿವೇಶನಕ್ಕಾಗಿ (9th Kuruba National Convention) ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಸಮುದಾಯದ ಹಿರಿಯ ನಾಯಕ ಮತ್ತು ಅನುಭವಿ ರಾಜಕಾರಣಿ ಹೆಚ್ ವಿಶ್ವನಾಥ್ (H Vishwanath) ಸಮಾವೇಶ ಆಯೋಜನೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರದಿಗಾನೊಂದಿಗೆ ಮಾತಾಡಿದ ವಿಶ್ವನಾಥ್ ಸಮಾವೇಶದ ಯಶಸ್ಸಿಗಾಗಿ ಸ್ಥಳೀಯ ಕುರುಬ ನಾಯಕರಲ್ಲದೆ ಈ ಭಾಗದ ಪ್ರಮುಖ ರಾಜಕಾರಣಿಗಳು ಹಾಗೂ ಸಚಿವರಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಬಹಳ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ದೇಶದಾದ್ಯಾಂತ ಹಬ್ಬಿರುವ ಹಲವಾರು ಕುರುಬ ನಾಯಕರು ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚಿನ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಸನ್ಮಾನಿಸಲಾಗುವ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೀಯ ನಾಯಕನಾಗಿ, ಅಥವಾ ಭಾವಿ ಪ್ರಧಾನ ಮಂತ್ರಿಯಾಗಿ ಪ್ರೊಜೆಕ್ಟ್ ಮಾಡುವ ಉದ್ದೇಶವಿದೆಯೇ ಅಂತ ಕೇಳಿದಾಗ ವಿಶ್ವನಾಥ್ ಯಾಕಾಗಬಾರದು, ಹೆಚ್ ಡಿ ದೇವೇಗೌಡರ ಹಾಗೆ ಅದೃಷ್ಟ ಮತ್ತು ಅವಕಾಶ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು ಎಂದರು. ಸಿದ್ದರಾಮಯ್ಯರಲ್ಲಿ ಪ್ರಧಾನ ಮಂತ್ರಿಯಾಗುವ ಯೋಗ್ಯತೆ, ಕ್ಷಮತೆ, ಮುತ್ಸದ್ದಿತನ ಮತ್ತ್ತು ಎಲ್ಲಕ್ಕೂ ಮಿಗಿಲಾಗಿ ರಾಜಕೀಯ ಅನುಭವ ಇದೆ ಎಂದು ವಿಶ್ವನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on