ಬೆಳಗಾವಿ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜಾತಿ ಗಣತಿ ವರದಿ (Caste Census Population Report) ಸಾರ್ವಜನಿಕ ಮಾಡುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದರು ಮಾರಾಯ್ರೇ. ಕಾಂತರಾಜು ವರದಿ, ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಲ್ಲಿಸುವ ಪ್ರಯತ್ನವಾಗಿತ್ತು ಆದರೆ ಕುಮಾರಸ್ವಾಮಿ ಅದನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಆಗ ಪುಟ್ಟರಂಗ ಶೆಟ್ಟಿ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿದ್ದರು ಎಂದು ಹೇಳಿದರು. ನಂತರ ಕಾಂತರಾಜು ಅವರ ಅವಧಿ ಮುಗಿದಾಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಜಯಪ್ರಕಾಶ ಹೆಗಡೆ ಅವರನ್ನು ನೇಮಕ ಮಾಡಿತು. ಆದರೆ, ಕಾರ್ಯದರ್ಶಿಗಳು ಸಹಿ ಮಾಡಿರದ ಕಾರಣ ಅವರು ನಮಗೆ ವರದಿ ನೀಡಿಲ್ಲ, ವರದಿ ನೀಡಿದಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು. ಶಿವಮೊಗ್ಗದಲ್ಲಿ ರವಿವಾರ ನಡೆದ ಗಲಾಟೆಯಲ್ಲಿ ಹಲ್ಲೆಕೋರರು ಪೊಲೀಸರ ಮೇಲೆ ದಾಳಿ ನಡೆಸಿರುವ ಬಗ್ಗೆ ಕೇಳಿದಾಗ, ದಾಂಧಲೆ ನಡೆಸಿದವರು ಯಾವುದೇ ಕೋಮಿನವರಾಗಿದ್ದರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ