ಪ್ರಿಯಾಂಕ್ ಖರ್ಗೆ ವೃಥಾ ಟೀಕೆಗಳನ್ನು ಮಾಡದೆ ಸೇನೆ ಜೊತೆ ನಿಂತುಕೊಳ್ಳಲಿ: ಬಿವೈ ವಿಜಯೇಂದ್ರ

Updated on: May 13, 2025 | 1:16 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವುದರ ಜೊತೆಗೆ ಯುದ್ಧ ಮತ್ತು ಕದನವಿರಾಮದ ಬಗ್ಗೆ ಎದ್ದಿದ್ದ ಎಲ್ಲ ಸಂದೇಹಗಳಿಗೆ ಉತ್ತರ ನೀಡಿದ್ದಾರೆ, ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರನ್ನು ಟೀಕಿಸುವ ಕೆಲಕ್ಕಿಳಿಯದೆ ಭಾರತದ ಸೇನೆಗಳು ಮಾಡಿದ ಅದ್ಭುತ ಕಾರ್ಯಗಳನ್ನು ಕೊಂಡಾಡುತ್ತ ಅವರೊಂದಿಗೆ ನಿಲ್ಲಬೇಕು ಎಂದು ವಿಜಯೇಂದ್ರ ಹೇಳಿದರು.

ಶಿವಮೊಗ್ಗ, ಮೇ 13: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕದನ ವಿರಾಮದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಇತರ ಕೆಲ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಶರಣಾಗುವ ಪ್ರಶ್ನೆಯೇ ಉದ್ಭವಿಸಲ್ಲ, ಮೋದಿಯವರ ರಾಜತಾಂತ್ರಿಕ ನಡೆಗಳನ್ನು ಅರ್ಥಮಾಡಿಕೊಳ್ಳದವರು ಹೀಗೆಲ್ಲ ಮಾತಾಡುತ್ತಾರೆ, ನಿನ್ನೆ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ಪ್ರಧಾನಿ ಮೋದಿಯವರು ಎಲ್ಲ ವಿಷಯಗಳನ್ನು ವಿವರಿಸಿದ್ದಾರೆ ಎಂದು ಹೇಳಿದರು. ಕದನ ವಿರಾಮ ಮಾಡಿಸಿ ಅಂತ ಪಾಕಿಸ್ತಾನ ಅಮೆರಿಕದ ಬಳಿ ಹೋಗಿತ್ತು, ಭಾರತದ ಮುಂದೆ ಅಂಗಲಾಚಿತ್ತು, ಇನ್ನು ಮುಂದೆ ಕದನ ವಿರಾಮದ ಚಿಕ್ಕ ಉಲ್ಲಂಘನೆಯನ್ನೂ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸುತ್ತೇವೆ ಎಂದು ಮೋದಿ ಪಾಕಿಸ್ತಾನವನ್ನು ಎಚ್ಚರಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ಪಂಜಾಬ್​ನ ಅದಂಪುರ ವಾಯುನೆಲೆಯಲ್ಲಿ ಸೈನಿಕರ ಜೊತೆ ಪ್ರಧಾನಿ ಮೋದಿ ಮಾತುಕತೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ