ಮಹಿಳೆ ವಿಚಾರಕ್ಕೆ ನಡೆಯಿತಾ ಮೈಸೂರಿನ ಕಾರ್ತಿಕ್ ಕೊಲೆ? ಎಸ್ಪಿ ಹೇಳಿದ್ದಿಷ್ಟು
ಮೈಸೂರಿನ ವರುಣ ಗ್ರಾಮದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕ್ ಕೊಲೆಯಾಗಿದ್ದು ಹಣಕಾಸಿನ ವಿಚಾರವಲ್ಲ, ಬದಲಾಗಿ ಮಹಿಳೆಯ ಕಾರಣಕ್ಕೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಪ್ರವೀಣ್, ಈ ಹಿಂದೆ ಕಾರ್ತಿಕ್ ಅವರ ಚಾಲಕನಾಗಿದ್ದ, ಕಾರ್ತಿಕ್ ಅವರಿಂದ ಬೆದರಿಕೆ ಎದುರಿಸಿದ್ದರಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ತಿಕ್ ಮತ್ತು ಆರೋಪಿಗಳ ನಡುವೆ ವೈಯಕ್ತಿಕ ದ್ವೇಷವಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಮೈಸೂರು, ಮೇ 06: ಮೈಸೂರು (Mysuru) ಹೊರವಲಯದ ವರುಣ ಗ್ರಾಮದ ಹೋಟೆಲ್ ಮುಂಭಾಗ ಭಾನುವಾರ (ಮೇ.04) ದಂದು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ (33) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಹಣಕಾಸಿನ ವಿಚಾರಕ್ಕೆ ಕಾರ್ತಿಕ್ನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಕೊಲೆ ಹಿಂದಿನ ಕಾರಣ ಬೇರೆಯದ್ದೇಯಾಗಿದೆ. ಕಾರ್ತಿಕ್ನನ್ನು ಕೊಲೆ ಮಾಡಲು ಕಾರಣವೇನು? ಎಂಬುವುದನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಹಿಳೆ ಸೇರಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಮೊದಲು ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅನ್ನೋ ಮಾಹಿತಿ ಇತ್ತು. ನಂತರ ಮಹಿಳೆ ವಿಚಾರಕ್ಕೆ ಕೊಲೆ ಆಗಿದೆ ಅಂತಾ ಗೊತ್ತಾಗಿದೆ. ಈ ಹಿಂದೆ ಆರೋಪಿ ಪ್ರವೀಣ್ಗೆ ಕಾರ್ತಿಕ್ ಕೊಲೆ ಬೆದರಿಕೆ ಹಾಕಿದ್ದನು. ಹಾಗಾಗಿ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್ನನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದರು.
ಪ್ರವೀಣ್ ಈ ಹಿಂದೆ ಕಾರ್ತಿಕ್ನ ಕಾರಿನ ಚಾಲಕನಾಗಿದ್ದನು. ಕೊಲೆಯಾದ ಕಾರ್ತಿಕ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದನು. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಾರ್ತಿಕ್ಗೆ ಪರಿಚಯವಿತ್ತು. ಕಾರ್ತಿಕ್ ಜೊತೆ ಇದ್ದವರಿಗೆಲ್ಲ ವೈಯಕ್ತಿಕ ದ್ವೇಷ ಇತ್ತು ಎಂದು ಹೇಳಿದರು.