ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ ಬಗ್ಗೆ ಸಚಿವ ಮುನಿಯಪ್ಪ ಹೇಳಿದ್ದಿಷ್ಟು
ಕರ್ನಾಟಕ ಸರ್ಕಾರವು ನಾಗಮೋಹನ್ದಾಸ್ ವರದಿಯ ಆಧಾರದ ಮೇಲೆ ಒಳಮೀಸಲಾತಿ ನಿರ್ಧಾರವನ್ನು ಕೈಗೊಂಡಿದೆ. ಇದು ಸುಮಾರು 40 ವರ್ಷಗಳ ಹೋರಾಟಕ್ಕೆ ದೊರೆತ ಫಲವಾಗಿದ್ದು, ರೋಸ್ಟರ್ ಬಿಂದುವಿನ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ಶೋಷಿತ ಮತ್ತು ವಂಚಿತ ಸಮುದಾಯಗಳ 101 ಜಾತಿಗಳಿಗೆ ನ್ಯಾಯ ಒದಗಿಸುವ ಈ ನಿರ್ಧಾರದಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರು, ಮೇ 09: ಕರ್ನಾಟಕ ಸರ್ಕಾರವು ನಾಗಮೋಹನ್ದಾಸ್ ವರದಿಯನ್ನು ಆಧರಿಸಿ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಚಾರಿತ್ರಿಕ ನಿರ್ಧಾರವನ್ನು ಕೈಗೊಂಡಿದೆ. ದಶಕಗಳಿಂದ ಬಾಕಿ ಉಳಿದಿದ್ದ ರೋಸ್ಟರ್ ಬಿಂದುವಿನ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಈ ನಿರ್ಧಾರವು ಸ್ಪಷ್ಟ ಪರಿಹಾರವನ್ನು ನೀಡುವ ಗುರಿ ಹೊಂದಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 4೦ ವರ್ಷದ ಸಂಘಸಂಸ್ಥೆಗಳ ದಲಿತ ಸಂಘ ಸಮಿತಿಗಳ ಹೋರಾಟಕ್ಕೆ ಫಲ ಸಿಕ್ಕಿದೆ. ರೋಸ್ಟರ್ ಬಿಂದುವಿನ ಸಮಸ್ಯೆಗಳನ್ನು ಪರಿಹರಿಸಲು ಹೊಸ ಸೂತ್ರವನ್ನು ಅಳವಡಿಸಲಾಗಿದೆ. 15 ಬಿಂದುಗಳವರೆಗೆ ಸಮಸ್ಯೆ ಇಲ್ಲ. ಆದರೆ, 14, 8, 9, ಅಥವಾ 3 ಬಿಂದುಗಳು ಬಂದಾಗ, ಉದಾಹರಣೆಗೆ, 15ರಲ್ಲಿ 12 ಬಿಂದುಗಳು ಸಾಮಾನ್ಯ ವರ್ಗಕ್ಕೆ ಹೋಗಿ, 3 ಬಿಂದುಗಳು ಎಸ್ಸಿ-ಎ, ಬಿ, ಸಿ ಗೆ ಬರುತ್ತವೆ. 14 ಬಿಂದುಗಳಿದ್ದಾಗ ಎ ಮತ್ತು ಬಿ ಗುಂಪುಗಳಿಗೆ ಸಿಕ್ಕಿ, ಸಿ ಗುಂಪಿಗೆ ಸಿಗದಿರುವಂತಹ ಸಮಸ್ಯೆಗಳು ಎದುರಾಗುತ್ತಿದ್ದವು. ಇದನ್ನು ಪರಿಹರಿಸಲು, ಷೆಡ್ಯೂಲ್ಡ್ ಕಾಸ್ಟ್ ಅಡಿಯಲ್ಲಿ ಬರುವ 101 ಜಾತಿಗಳೆಲ್ಲವೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
