ಕೊಪ್ಪಳ: ಜೆಸ್ಕಾಂ ನಿರ್ಲಕ್ಷ್ಯದಿಂದ ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ

Edited By:

Updated on: Jun 22, 2026 | 2:29 PM

ಕೊಪ್ಪಳ ಜಿಲ್ಲೆಯಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಬೆಳೆ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಹೈರಾಣಾಗಿದ್ದಾರೆ. ಹೀಗಾಗಿ ಎಂಟು ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸ್ಪ್ರಿಂಕ್ಲರ್‌ಗಳ ಮೊರೆ ಹೋಗಿದ್ದರೂ, ಅಸಮರ್ಪಕ ವಿದ್ಯುತ್‌ನಿಂದ ಸಂಕಷ್ಟದಲ್ಲಿದ್ದಾರೆ.

ಕೊಪ್ಪಳ, ಜೂನ್ 22: ಕೊಪ್ಪಳ ಜಿಲ್ಲೆಯ ರೈತರು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಮಳೆ ಕೊರತೆಯ ಸಮಸ್ಯೆ ಪರಿಹರಿಸಲು ರೈತರು ಸ್ಪ್ರಿಂಕ್ಲರ್‌ಗಳ ಮೊರೆ ಹೋಗಿದ್ದರೂ ಇದೀಗ ಸಮರ್ಪಕ ವಿದ್ಯುತ್ ಸಿಗದೆ ಹರಸಾಹಸ ಪಡುತ್ತಿದ್ದಾರೆ. ಬಿ.ಹೊಸಳ್ಳಿಯ ರೈತ ರಮೇಶ್ ಮತ್ತು ಸುರೇಶ್ ಸೇರಿದಂತೆ ಹಲವು ರೈತರು ಜೆಸ್ಕಾಂನಿಂದ ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸುತ್ತಿದ್ದಾರೆ. ಪ್ರಸ್ತುತ ವಿದ್ಯುತ್ ಪೂರೈಕೆ ಸಮಯ ಅನಿಶ್ಚಿತವಾಗಿದ್ದು, ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ರೈತರೊಬ್ಬರು ಮಾತನಾಡಿ, ‘ಮೊದಲು ಎಂಟು ಅಥವಾ ಒಂಬತ್ತು ಗಂಟೆಗೆ ಹೋಗುತ್ತಿದ್ದ ಕರೆಂಟ್ ಈಗ ಏಳು ಗಂಟೆಗೇ ಹೋಗುತ್ತಿದೆ. ನಾವು ಕೇವಲ ಹತ್ತು ನಿಮಿಷ ಹೆಚ್ಚು ವಿದ್ಯುತ್ ಬಿಡಿ ಎಂದು ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರುಣಿಸುವುದು ಬಹಳ ಕಷ್ಟವಾಗಿದೆ’ ಎಂದು ಅಲವತ್ತುಕೊಂಡಿದ್ದಾರೆ. ಸಮರ್ಪಕ ವಿದ್ಯುತ್ ಪೂರೈಕೆಯಾಗದಿದ್ದರೆ ತಮ್ಮ ಬೆಳೆಗಳು ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us