ವಾಹನ ಸವಾರರೇ ಗಮನಿಸಿ: ಕೆಆರ್ ಸರ್ಕಲ್ ಅಂಡರ್ ಪಾಸ್ ಬಂದ್, ಯುವತಿ ಮೃತಪಟ್ಟು 3 ವರ್ಷವೇ ಕಳೆದರೂ ಸುಧಾರಿಸಿಲ್ಲ ಪರಿಸ್ಥಿತಿ!

Edited By:

Updated on: Apr 30, 2026 | 9:08 AM

ಬೆಂಗಳೂರಿನ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಭಾರಿ ಮಳೆಗೆ ಮತ್ತೆ ಜಲಾವೃತಗೊಂಡಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. 2023ರಲ್ಲಿ ಇದೇ ಸ್ಥಳದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದರೂ, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಸುಮಾರು 10 ಅಡಿ ನೀರು ನಿಂತಿದ್ದು, ಇದು ಜನಪ್ರತಿನಿಧಿಗಳು ಓಡಾಡುವ ಪ್ರಮುಖ ಮಾರ್ಗವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಕೆಆರ್ ಸರ್ಕಲ್ ಅಂಡರ್‌ಪಾಸ್ ಮತ್ತೆ ಜಲಾವೃತಗೊಂಡಿದೆ. ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ನಿಂತಿರುವ ಕಾರಣ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. 2023ರ ಮೇಯಲ್ಲಿ ಇದೇ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ್ದರು. ದುರಂತ ನಡೆದು ಸುಮಾರು ಎರಡು-ಮೂರು ವರ್ಷಗಳೇ ಕಳೆದರೂ, ಅಂಡರ್‌ಪಾಸ್‌ನಲ್ಲಿ ನೀರಿನ ಹರಿವಿಗೆ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ರಾತ್ರಿ ಸುರಿದ ಧಾರಾಕಾರ ಮಳೆಗೆ ಅಂಡರ್‌ಪಾಸ್ ಸುಮಾರು 10 ಅಡಿಯಷ್ಟು ನೀರು ತುಂಬಿದೆ. ಬೆಳಗ್ಗೆಯಾದರೂ ನೀರು ಇಳಿದಿಲ್ಲ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ, ಸಚಿವರು ಮತ್ತು ಶಾಸಕರು ಪ್ರತಿನಿತ್ಯ ಸಂಚರಿಸುವ ಈ ಮಾರ್ಗದಲ್ಲಿ ಇಂತಹ ಅವ್ಯವಸ್ಥೆ ಮುಂದುವರಿದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಡರ್‌ಪಾಸ್ ಬಂದ್ ಆಗಿರುವುದರಿಂದ ಪೀಕ್ ಅವರ್‌ನಲ್ಲಿ ಕೆಆರ್ ಸರ್ಕಲ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us