ಭೂಕುಸಿತದಿಂದ ರೈಲು ಸಂಚಾರ ಸ್ಥಗಿತ: ತೀವ್ರ ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು

Edited By:

Updated on: Aug 02, 2026 | 10:43 AM

ಹಾಸನ ಮತ್ತು ಮಂಗಳೂರು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಭಾರೀ ಮಳೆಯಿಂದಾಗಿ ಯೆಡಕುಮಾರಿ ಬಳಿ ಗುಡ್ಡ ಕುಸಿದಿದ್ದು, ಹಲವು ರೈಲುಗಳು ಸ್ಥಗಿತಗೊಂಡಿವೆ. ಇದರಿಂದ ನೂರಾರು ಪ್ರಯಾಣಿಕರು, ಅದರಲ್ಲೂ ಬೆಂಗಳೂರಿಗೆ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಹೊರಟಿದ್ದ ಆಕಾಂಕ್ಷಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ರೈಲ್ವೆ ಇಲಾಖೆ ತೆರವು ಕಾರ್ಯ ಆರಂಭಿಸಿದೆ.

ಹಾಸನ, ಆಗಸ್ಟ್​​ 02: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಸನ ಮತ್ತು ಮಂಗಳೂರು ನಡುವಿನ ರೈಲ್ವೆ ಹಳಿಯಲ್ಲಿ ಭೂಕುಸಿತ ಉಂಟಾಗಿದೆ. ಯೆಡಕುಮಾರಿ ಹಾಗೂ ಶ್ರೀವಾಗಿಲು ನಿಲ್ದಾಣಗಳ ನಡುವೆ ಗುಡ್ಡ ಕುಸಿದ ಪರಿಣಾಮ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ಮಾಹಿತಿ ಪ್ರಕಾರ, ಏಳು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎರಡು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಘಟನೆಯಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿಯೂ ಇಂದು ನಡೆಯಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಗೆ ಬೆಂಗಳೂರಿಗೆ ತೆರಳುತ್ತಿದ್ದ ಪರೀಕ್ಷಾರ್ಥಿಗಳು ರೈಲುಗಳ ಅಡಚಣೆಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯದಂತಹ ನಿಲ್ದಾಣಗಳಲ್ಲಿ ರೈಲುಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ಗಮ್ಯ ತಲುಪಲು ಪರದಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us