‘ಲವ್ ಯೂ ರಚ್ಚು’ ಸಿನಿಮಾ ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಹಲವು ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡದಲ್ಲಿ ವೈಮನಸ್ಸು ಮೂಡಿದೆ. ನಟ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ. ಈ ವಿಚಾರವನ್ನು ಅಜಯ್ ರಾವ್ ಅವರು ಟಿವಿ9 ಕನ್ನಡದ ಎದುರು ಹೇಳಿಕೊಂಡಿದ್ದರು. ‘ನನಗೆ ನಿರ್ಮಾಪಕರಿಂದ ಅವಮಾನ ಆಗಿದೆ. ನಾನು ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ತಂಡದ ಜತೆ ತೆರಳುವುದಿಲ್ಲ. ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ’ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಗುರು ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ. ‘ನಾನು ಕೋಟಿಕೋಟಿ ಹಾಕಿ ಸಿನಿಮಾ ಮಾಡಿದ್ದೇನೆ. ಅಜಯ್ ರಾವ್ ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಆದರೆ, ಇಲ್ಲಿವರೆಗೆ ಸಿನಿಮಾ ಬಗ್ಗೆ ಒಂದೇ ಒಂದು ಪೋಸ್ಟ್ ಹಾಕಿಲ್ಲ. ಹಾಕಿದ ದುಡ್ಡು ಬರದಿದ್ದರೆ ಮನೆ ಮುಂದೆ ಹೋಗಿ ಕೂರುತ್ತೇನೆ. ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್ ರಾವ್