ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ಕರ್ನಾಟಕದಲ್ಲಿ ವಾಣಿಜ್ಯ LPG ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದೆ. ಎಂಟು ದಿನಗಳಿಂದ ಬಗೆಹರಿಯದ ಈ ಸಮಸ್ಯೆ ಬೆಂಗಳೂರಿನ ಪಬ್ಗಳಲ್ಲೂ ತಾಂಡವವಾಡಿದ್ದು, ಫೈರ್ಲೆಸ್ ಅಡುಗೆಗೆ ಮುಂದಾಗಿವೆ. ಕೋಲಾರದ ಹೋಟೆಲ್ಗಳೂ ಸೌದೆ ಒಲೆ, ಇದ್ದಿಲು ಒಲೆಗಳನ್ನು ಆಶ್ರಯಿಸಿದ್ದು, ಕೆಲವು ಹೋಟೆಲ್ಗಳು ಕಲ್ಯಾಣ ಮಂಟಪಗಳಲ್ಲಿ ಊಟ ತಯಾರಿಸುತ್ತಿವೆ.
ಬೆಂಗಳೂರು, ಕೋಲಾರ ಮಾರ್ಚ್ 17: ಕರ್ನಾಟಕದಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ತೀವ್ರಗೊಂಡಿದ್ದು, ಕಳೆದ ಎಂಟು ದಿನಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಇದರ ಬಿಸಿ ಬೆಂಗಳೂರಿನಾದ್ಯಂತ ಪಬ್ಗಳಿಗೂ ತಟ್ಟಿದೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ, ಸಿಲಿಂಡರ್ ಕೊರತೆಯಿಂದ ಪಬ್ಗಳ ಮಾಲಕರು ಕಂಗಾಲಾಗಿದ್ದಾರೆ. ಹಲವು ಪಬ್ಗಳಲ್ಲಿ ‘ಫೈರ್ಲೆಸ್ ಕುಕಿಂಗ್’ ಅಂದರೆ ಬೆಂಕಿ ಬಳಸದೆ ತಯಾರಿಸುವ ಸಲಾಡ್, ಹಣ್ಣುಗಳಂತಹ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.
ಕೋಲಾರ ಜಿಲ್ಲೆಯಲ್ಲೂ ಹೋಟೆಲ್ಗಳು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಪರದಾಡುತ್ತಿವೆ. ವಾಣಿಜ್ಯ ಸಿಲಿಂಡರ್ ಸಿಗದೆ ಇರುವ ಕಾರಣ ಪಂಚವಟಿಯಂತಹ ಹಳೆಯ ಹೋಟೆಲ್ಗಳು ಸೌದೆ ಒಲೆಯ ಮೊರೆ ಹೋಗಿವೆ. ಹೊಗೆಯ ಸಮಸ್ಯೆ, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ, ಮತ್ತು ಮೆನು ನಿರ್ಬಂಧಗಳಿಂದಾಗಿ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಸಿಬ್ಬಂದಿಯೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹೋಟೆಲ್ಗಳು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಮಾಡಿ ಹೋಟೆಲ್ಗಳಿಗೆ ತಂದು ಗ್ರಾಹಕರಿಗೆ ಬಡಿಸುವಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
