ಎರಡನೇ ಕನ್ನಡಿಗ ಪ್ರಧಾನ ಮಂತ್ರಿಯಾದರೆ ಯಾರಿಗೆ ತಾನೇ ಸಂತೋಷವಾಗಲ್ಲ? ಜಿ ಪರಮೇಶ್ವರ್, ಗೃಹ ಸಚಿವ

ದಲಿತ ಸಮುದಾಯದ ನಾಯಕನನ್ನು ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿ ಅಂತ ಪ್ರೊಜೆಕ್ಟ್ ಮಾಡಿದರೆ ಇಂಡಿಯ ಮೈತ್ರಿಕೂಟಕ್ಕೆ ನೆರವಾಗಬಹುದು ಎನ್ನುವ ಲೆಕ್ಕಾಚಾರ ಅದರ ನಾಯಕರು ಮಾಡಿಕೊಂಡಿರಬಹುದು. ಅದರೆ, ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಅದರ ಬಗ್ಗೆ ಹೆಚ್ಚು ಉತ್ಸಾಹ ತೋರುತ್ತಿಲ್ಲ, ವಾಸ್ತವವಾದಿಯಾಗಿ ತಮ್ಮ ವಿಚಾರವನ್ನು ಮುಂದಿಡುತ್ತಿದ್ದಾರೆ.

ಬೆಂಗಳೂರು: ಇಂಡಿಯ ಮೈತ್ರಿಕೂಟದ ಪ್ರಮುಖರಾಗಿರುವ ಅರವಿಂದ ಕೇಜ್ರಿವಾಲ್ (Aravind Kejriwal) ಮತ್ತು ಮಮತಾ ಬ್ಯಾನರ್ಜೀ (Mamata Banerjee) ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟಕ್ಕೆ ಬಹುಮತ ಸಿಕ್ಕರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಧಾನ ಮಂತ್ರಿ ಆಗಲಿದ್ದಾರೆ ಅನ್ನೋದು ದೇಶದಲ್ಲೀಗ ಭಾರೀ ಚರ್ಚೆಯ ವಿಷಯವಾಗಿದೆ. ಇಷ್ಟಕ್ಕೂ ಖರ್ಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ ಅಂತ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರನ್ನು ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಆ ವಿಚಾರ ತನಗೇನೂ ತಿಳಿಯದು ಎಂದು ಹೇಳಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅವರೇ ಆಗಿರುವುದರಿಂದ ಸ್ಪರ್ಧಿಸಬಯಸಿದಲ್ಲಿ ತಾವೆಲ್ಲ ಅವರ ಗೆಲುವಿಗೆ ಶ್ರಮಿಸಬೇಕಾಗುತ್ತದೆ ಎಂದರು. ಅವರು ಪ್ರಧಾನ ಮಂತ್ರಿಯಾದರೆ, ಹುದ್ದೆಯನ್ನು ಅಲಂಕರಿಸುವ ಎರಡನೇ ಕನ್ನಡಿಗ ಅನಿಸಿಕೊಳ್ಳುತ್ತಾರೆ, ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನಿದೆ ಅಂತ ಹೇಳಿದ ಪರಮೇಶ್ವರ್, ಆದರೆ ಅಂತ ಸನ್ನಿವೇಶ ನಿರ್ಮಾಣವಾಗಲು ಇಂಡಿಯ ಮೈತ್ರಿಕೂಟ ಬಿಜೆಪಿ ಜೊತೆ ಹೋರಾಡಬೇಕಾಗುತ್ತದೆ, ಅವಶ್ಯವಿರುವಷ್ಟು ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ-ಅದಾದ ಬಳಿಕವೇ ಮುಂದಿನ ಯೋಚನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us