ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನ (Budget Session) ಇಂದು ಪುನರಾರಂಭಗೊಂಡಿದೆ. ಕ್ಷೇತ್ರಗಳಿಗೆ ಅನುದಾನ ಹಂಚಿಕೆ ವಿಷಯದಲ್ಲಿ ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮತ್ತು ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ನಡುವೆ ಮಾತಿನ ಚಕಮಕಿ ನಡೆಯಿತು. ವಿಜಯಪುರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಯಾಕೆ ಕೊಡಬೇಕು ಎಂದು ಜಮೀರ್ ನೇರವಾಗಿ ಯತ್ನಾಳ್ ರನ್ನು ಕಾದಾಟಕ್ಕೆ ಎಳೆದರು. ನಿಮ್ಮ ಕ್ಷೇತ್ರದಲ್ಲಿ ಬುರ್ಖಾ ಧರಿಸುವವರು ತಮ್ಮಲ್ಲಿಗೆ ಬರಬಾರದು, ಗಡ್ಡ ಬಿಟ್ಟವರು ಬರಬಾರದು ಅಂತ ಅಲ್ಪಸಂಖ್ಯಾತರ ಬಗ್ಗೆ ಕೇವಲವಾಗಿ ಮಾತಾಡುತ್ತೀರಿ, ನಿಮ್ಮ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅಪಾರ ಪ್ರಮಾಣದಲ್ಲಿದ್ದಾರೆ, ಪರಿಸ್ಥಿತಿ ಹೀಗಿರುವಾಗ ನಿಮಗೆ ಯಾಕೆ ಅನುದಾನ ಬೇಕು ಅಂತ ಕೇಳಿದಾಗ ಯತ್ನಾಳ್ ಅವರಲ್ಲದೆ, ಡಾ ಸಿಎನ್ ಅಶ್ವಥ್ ನಾರಾಯಣ, ಬಿವೈ ವಿಜಯೇಂದ್ರ ಮತ್ತು ಬೇರೆ ಕೆಲ ಶಾಸಕರು ಸಚಿವನ ಮೇಲೆ ಮುಗಿಬೀಳುತ್ತಾರೆ. ಸರಿ ಬಿಡಿ, ಅನುದಾನ ಬೇಡ, ಯತ್ನಾಳ್ ಬದಲು ನೀವೇ ವಿಜಯಪುರ ಹೋಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿ ಎಂದು ಅಶ್ವಥ್ ನಾರಾಯಣ ಹೇಳುತ್ತಾರೆ. ಯತ್ನಾಳ್ ಸಹ ಏನೋ ಹೇಳುತ್ತಾರೆ ಆದರೆ ಅದು ಸ್ಪಷ್ಟವಾಗಿ ಕೇಳಿಸಲ್ಲ. ಏತನ್ಮಧ್ಯೆ, ಸ್ಪೀಕರ್ ಯುಟಿ ಖಾದರ್, ಕೇಳಿರುವ ಪ್ರಶ್ನೆಗೆ ಉತ್ತರ ಕೊಡಿ ಅಂತ ಜಮೀರ್ ಗೆ ತಾಕೀತು ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ