ಸಚಿವ ಶ್ರೀರಾಮುಲು ಹಿಜಾಬ್ ವಿವಾದ ಬಗ್ಗೆ ಕಾಮೆಂಟ್​ ಮಾಡುತ್ತಾ ಸಮಯ ವ್ಯರ್ಥ ಮಾಡದೆ, ವಿಮ್ಸ್​​ನಲ್ಲಿ ರೋಗಿಗಳೊಂದಿಗೆ ಮಾತಾಡಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 05, 2022 | 10:11 PM

ಶ್ರೀರಾಮುಲು ಬೇರೆ ನಾಯಕರಂತೆ ಸಮಯ ಪೋಲು ಮಾಡದೆ ಅತ್ಯಂತ ಯೋಗ್ಯವಾದ ರೀತಿಯಲ್ಲಿ ಅದನ್ನು ವ್ಯಯ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರನ್ನು ಕಂಡು ಮಾತಾಡುವಾಗ ಅವರಲ್ಲಿ ಉಂಟಾಗುವ ಸಂತಸ, ನಿರಾಳತೆ, ನಮ್ಮ ಬಗ್ಗೆ ಕಾಳಜಿವಹಿಸುವವರಿದ್ದಾರೆ ಅಂತ ಹುಟ್ಟಿಸುವ ಕೃತಾರ್ಥತೆಯ ಭಾವ-ವರ್ಣನೆಗೆ ನಿಲುಕದಂಥವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸಾರಿಗೆ ಸಚಿವ ಬಿ ಶ್ರೀರಾಮಲು (B Sriramulu) ಅವರಿಗೆ ಬಳ್ಳಾರಿ ಜಿಲ್ಲೆಯ (Ballari District) ಉಸ್ತುವಾರಿ ನೀಡಿದ್ದು ಒಂದು ಅತ್ಯುತ್ತಮ ನಿರ್ಧಾರ ಅನ್ನೋದರಲ್ಲಿ ಎರಡು ಮಾತಿಲ್ಲ. ಸಚಿವರು ತನಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಯಿಂದ ಸಂತುಷ್ಟರಾಗಿದ್ದಾರೆ ಮತ್ತು ಕಾರ್ಯಶೀಲರೂ ಆಗಿದ್ದಾರೆ. ಶ್ರೀರಾಮುಲು ಶನಿವಾರ ಬಳ್ಳಾರಿಯ ವಿಜಯನಗರ ಇನ್​​​​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸಸ್ (ವಿಮ್ಸ್​, ಬಳ್ಳಾರಿ ಜಿಲ್ಲಾಸ್ಪತ್ರೆ) (VIMS)​ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು ಮತ್ತು ರೋಗಿಗಳೊಂದಿಗೆ ಅವರ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು. ಶ್ರೀರಾಮುಲು ಅವರು ಹಿಂದೆ ಆರೋಗ್ಯ ಸಚಿವರಾಗಿದ್ದಾಗಲೂ ವಿಮ್ಸ್​ಗೆ ಆಗಾಗ್ಗೆ ಭೇಟಿ ನಿಡುತ್ತಿದ್ದುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ಶ್ರೀರಾಮುಲು ಮಾಡುತ್ತಿರುವ ಕೆಲಸ ಕನ್ನಡಿಗರಿಗೆ ಖುಷಿ ನೀಡುತ್ತಿರುವ ಹಿಂದೆ ಕೆಲ ಕಾರಣಗಳಿವೆ. ನಾವೆಲ್ಲ ಗಮನಿಸುತ್ತಿರುವ ಹಾಗೆ ಹಿಜಾಬ್ ವಿವಾದದ ಬಗ್ಗೆ ಎಲ್ಲ ಪಕ್ಷಗಳ ರಾಜಕೀಯ ನಾಯಕರು ದಿನವಿಡೀ ಹೇಳಿಕೆಗಳನ್ನು ನೀಡುತ್ತಾ ವೃಥಾ ಸಮಯ ಹಾಳು ಮಾಡುತ್ತಿದ್ದಾರೆ. ವಿಷಯ ಈಗ ನ್ಯಾಯಾಂಗದ ಸುಪರ್ದಿಯಲ್ಲಿದೆ ಎಂಬ ಅರಿವು ಸಹ ಅವರಿಗಿಲ್ಲ.

ಶ್ರೀರಾಮುಲು ಬೇರೆ ನಾಯಕರಂತೆ ಸಮಯ ಪೋಲು ಮಾಡದೆ ಅತ್ಯಂತ ಯೋಗ್ಯವಾದ ರೀತಿಯಲ್ಲಿ ಅದನ್ನು ವ್ಯಯ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರನ್ನು ಕಂಡು ಮಾತಾಡುವಾಗ ಅವರಲ್ಲಿ ಉಂಟಾಗುವ ಸಂತಸ, ನಿರಾಳತೆ, ನಮ್ಮ ಬಗ್ಗೆ ಕಾಳಜಿವಹಿಸುವವರಿದ್ದಾರೆ ಅಂತ ಹುಟ್ಟಿಸುವ ಕೃತಾರ್ಥತೆಯ ಭಾವ-ವರ್ಣನೆಗೆ ನಿಲುಕದಂಥವು. ನಿಮಗೆ ಈ ವಿಡಿಯೋನಲ್ಲಿ ಅವೆಲ್ಲ ಕಾಣುತ್ತಿವೆ.

ರೋಗಿಗಳು ಮತ್ತು ಅವರೊಂದಿಗಿರುವ ಸಹಾಯಕರು ಸಚಿವರಿಗೆ ಕೃತಜ್ಞತೆಯಿಂದ ಕೈ ಜೋಡಿಸುತ್ತಿದ್ದಾರೆ. ಒಬ್ಬ ಸಚಿವ ತಮ್ಮಲ್ಲಿಗೆ ಬಂದು ಯೋಗಕ್ಷೇಮ ವಿಚಾರಿಸುವುದು ಸಾಮಾನ್ಯ ಮಾತಲ್ಲ.

ಮತ್ತೊಂದು ಸಂಗತಿ ಗಮನಿಸಿ. ಸಚಿವರು ಯಾವ ರೋಗಿಯೊಂದಿಗೂ ಕಾಟಾಚಾರಕ್ಕೆ ಮಾತಾಡುತ್ತಿಲ್ಲ. ಆಸ್ಥೆ, ಕಾಳಜಿಯಿಂದ ಮಾತಾಡುತ್ತಿದ್ದಾರೆ. ಈ ವಾರ್ಡ್​​​​​ ನಲ್ಲಿರುವ ಪ್ರತಿಯೊಬ್ಬ ರೋಗಿಯಲ್ಲಿಗೆ ಅವರು ಹೋಗುತ್ತಿದ್ದಾರೆ.

ಶ್ರೀರಾಮುಲು ಕಪ್ಪು ಟೀ ಮತ್ತು ಅದೇ ವರ್ಣದ ಟ್ರೌಸರ್​​ನಲ್ಲಿ ಮಂತ್ರಿಗಿಂತ ಜಾಸ್ತಿ ಚಿತ್ರನಟನ ಹಾಗೆ ಕಾಣುತ್ತಿದ್ದಾರೆ. ಪ್ರಾಯಶಃ ಅದೇ ಕಾರಣಕ್ಕೆ ಕೆಲ ರೋಗಿಗಳು ಅವರ ಗುರುತು ಹಿಡಿಯುತ್ತಿಲ್ಲ!!

ಅದೇನೆ ಇರಲಿ, ಶ್ರೀರಾಮುಲು ಬೇರೆ ನಾಯಕರಿಗಿಂತ ಭಿನ್ನ ಅನ್ನೋದು ಗೊತ್ತಾಗುತ್ತಿದೆ.  ಇನ್ ಫ್ಯಾಕ್ಟ್​ ಅವರಿಗೆ ಬಳ್ಳಾರಿಯಲ್ಲಿ ಮಾಧ್ಯಮದವರು ಹಿಜಾಬ್ ಬಗ್ಗೆ ಪ್ರತಿಕ್ರಿಯೆ ಕೇಳಿದರು. ಆದರೆ ಅವರು ಆ ವಿಷಯದ ಬಗ್ಗೆ ಮಾತಾಡುವುದಿಲ್ಲ ಅಂತ ಖಡಾಖಂಡಿತವಾಗಿ ಹೇಳಿದರು.

ಇದನ್ನೂ ಓದಿ:   B Sriramulu: ರಾಜಕೀಯ ಜಂಜಾಟ ಮರೆತು ಕ್ರಿಕೆಟ್ ಆಡಿದ ಬಳ್ಳಾರಿ ಬುಲ್ಲೋಡು!

Follow us on