ಮಂಗಳಾರತಿ, ಪುಷ್ಪಾರ್ಚನೆ ನನಗೆ ಹೊಸದಲ್ಲ: ದಸರಾ ಉದ್ಘಾಟನೆ ವೇದಿಕೆಯಲ್ಲೇ ಟೀಕಾಕಾರರಿಗೆ ಬಾನು ಮುಷ್ತಾಕ್ ತಿರುಗೇಟು
ಮೈಸೂರು ದಸರಾ 2025ರ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೇ ಬಾನು ಮುಷ್ತಾಕ್ ಅವರು, ತಮ್ಮ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದವರಿಗೆ ತಿರುಗೇಟು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಿದರು. ಬಾನು ಮುಷ್ತಾಕ್ ಆತ್ಮಕಥೆಯ ಒಂದು ಭಾಗ ನಾಳೆಯೇ ಪ್ರಕಟವಾಗಲಿದೆ ಎಂದು ಅವರು ತಿಳಿಸಿದರು.
ಮೈಸೂರು, ಸೆಪ್ಟೆಂಬರ್ 22: ನಾನು ಇದುವರೆಗೂ ಸುಮಾರು ಕಾರ್ಯಕ್ರಮಗಳನ್ನು ನಡೆಸಿದ್ದೇನೆ, ಆಹ್ವಾನಿತಳಾಗಿದ್ದೇನೆ ಮತ್ತು ಭಾಗವಹಿಸಿದ್ದೇನೆ. ನಾನು ನೂರಾರು ಬಾರಿ ದೀಪಗಳನ್ನು ಬೆಳಗಿದ್ದೇನೆ, ಅನೇಕ ಬಾರಿ ಪುಷ್ಪಾರ್ಚನೆಯನ್ನು ಕೂಡ ಮಾಡಿದ್ದೇನೆ. ಮಂಗಳಾರತಿಯನ್ನು ಕೂಡ ಸ್ವೀಕರಿಸಿದ್ದೇನೆ ಎಂದು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಹೇಳಿದರು. ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಟೀಕಾಕಾರರಿಗೆ ತೊರುಗೇಟು ನೀಡಿದರು. ಪುಷ್ಪಾರ್ಚನೆ, ಮಂಗಳಾರತಿ ಸ್ವಿಕರಿಸುವುದು, ದೀಪ ಬೆಳಗವುದು ನನಗೆ ಹೊಸದಲ್ಲ. ಈ ಬಗ್ಗೆ ಈ ನಾಳೆ ನನ್ನ ಬದುಕು ಬರಹದ ಕುರಿತಾದ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿ ಉಲ್ಲೇಖವಿದೆ. ನನ್ನ ಮತ್ತು ಈ ಹಿಂದೂ ಧರ್ಮದ ಸಂಬಂಧ ಬಾಂಧವ್ಯ ಹೇಗೆ ಇದೆ ಅನ್ನುವುದರ ಬಗ್ಗೆ ನನ್ನ ಆತ್ಮಕಥೆಯಲ್ಲಿ ಬರೆದಿದ್ದೇನೆ ಎಂದರು.
ಎಷ್ಟೇ ರೀತಿಯ ಸವಾಲುಗಳು ಎದುರಾದರೂ ದಿಟ್ಟವಾಗಿ ನಿಂತು ನನ್ನನ್ನು ಆಹ್ವಾನಿಸಿ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ನನಗೆ ಆಹ್ವಾನವನ್ನು ನೀಡಿ ನೈತಿಕವಾದಂತಹ ಬೆಂಬಲವನ್ನುನೀಡಿದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದೂ ಮುಷ್ತಾಕ್ ಹೇಳಿದರು.
