Karnataka Transport Strike; ಕೋರ್ಟ್ ಆದೇಶದಂತೆ ಮುಷ್ಕರವನ್ನು ಕೇವಲ ಮುಂದೂಡಿದ್ದೇವೆ: ಅನಂತ್ ಸುಬ್ಬಾರಾವ್

Updated on: Aug 05, 2025 | 7:45 PM

ಕೆಎಸ್​ಅರ್​ಟಿಸಿಯ 1.15 ಲಕ್ಷ ನೌಕರರು ಬೂದಿ ಮುಚ್ಚಿದ ಕೆಂಡದಂತಿದ್ದಾರೆ, ಗಾಳಿ ತಾಕಿದ ಕೂಡಲೇ ಅವರು ಪ್ರಕಾಶಮಾನವಾಗಿ ಉರಿಯಲಾರಂಭಿಸುತ್ತಾರೆ, ಮುಖ್ಯಮಂತ್ರಿಯವರಿಗೆ ಈಗ ಪರಿಸ್ಥಿತಿ ಚೆನ್ನಾಗಿ ಅರ್ಥವಾಗಿರುತ್ತದೆ, ಅಧಿಕಾರಿಗಳು ಅವರ ದಿಕ್ಕು ತಪ್ಪಿಸಿದ್ದರು. ಹಾಗಾಗಿ, ಆದಷ್ಟು ಬೇಗ ಅವರು ನಮ್ಮನ್ನು ಕರೆಸಿ ಮಾತುಕತೆ ನಡೆಸಬೇಕು, ನಮ್ಮ ಹೋರಾಟಕ್ಕೆ ಹಿನ್ನೆಡೆಯಾಗಿಲ್ಲ, ಸೊನ್ನೆಯಿಂದ ₹ 718 ಕೋಟಿವರೆಗೆ ಬಂದಿದ್ದೇವೆ ಎಂದು ಸುಬ್ಬಾರಾವ್ ಹೇಳಿದರು.

ಬೆಂಗಳೂರು, ಆಗಸ್ಟ್ 5: ಟಿವಿ9 ಬೆಂಗಳೂರು ಪ್ರತಿನಿಧಿಯೊಂದಿಗೆ ಮಾತಾಡಿದ ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹೆಚ್ ವಿ ಅನಂತ್ ಸುಬ್ಬಾರಾವ್ (HV Anant Subbarao) ಸಾರಿಗೆ ನೌಕರರ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ, ನೌಕರರು ತಮ್ಮ ಕೆಲಸಗಳಿಗೆ ರಿಪೋರ್ಟ್ ಮಾಡಿಕೊಳ್ಳಬೇಕೆಂದು ಹೇಳಿದರು. ನೌಕರರಲ್ಲಿ ಯಾವ ಗೊಂದಲವೂ ಇಲ್ಲ, ಮುಷ್ಕರಕ್ಕೆ ಕರೆ ಕೊಟ್ಟವರು ನಾವು ಮತ್ತು ನಾವೇ ಕೆಲಸಕ್ಕೆ ಹಾಜರಾಗುವಂತೆ ಹೇಳುತ್ತಿದ್ದೇವೆ ಎಂದು ಹೇಳಿದ ಅವರು, ಸರ್ಕಾರ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮನ್ನು ಮಾತುಕತೆಗೆ ಕರೆದು ಇತರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು. ಸರ್ಕಾರ ನೀಡಲು ಸಮ್ಮತಿಸಿರುವ 14 ತಿಂಗಳ ಹಿಂಬಾಕಿಯನ್ನು ಯಾವ ಕಾರಣಕ್ಕೂ ನಾವು ತೆಗೆದುಕೊಳ್ಳಲ್ಲ, ಎಲ್ಲ38 ತಿಂಗಳುಗಳ ಅರಿಯರ್ಸ್ ನೀಡಬೇಕು ಎಂದು ಸುಬ್ಬಾರಾವ್ ಹೇಳಿದರು.

ಇದನ್ನೂ ಓದಿ:   Karnataka Transport Strike; ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು: ಅನಂತ್ ಸುಬ್ಬಾರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Aug 05, 2025 06:30 PM