ಬಿಜೆಪಿಯ ಬಂಡಾಯ ಶಾಸಕರಿಂದ ದೂರವೇನೂ ಆಗಿಲ್ಲ, ಮೊನ್ನೆ ಗೋಕಾಕ್​ನಲ್ಲಿ ಎಲ್ಲರೂ ಜೊತೆಗಿದ್ದೆವು: ಯತ್ನಾಳ್

Updated on: Jul 23, 2025 | 5:57 PM

ಭಿನ್ನ ಬಿಜೆಪಿ ನಾಯಕರಿಂದ ತಾನು ಬೇರೆಯೇನೂ ಆಗಿಲ್ಲ, ಮೊನ್ನೆ ಗೋಕಾಕನಲ್ಲಿ ಲಕ್ಷ್ಮಿ ಜಾತ್ರೆ ನಡೆದಾಗ ರಮೇಶ್ ಜಾರಕಿಹೊಳಿ ಅವರ ಜೊತೆಯಿದ್ದೆ. ನಂತರ ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಮೊದಲಾದವರು ತಮ್ಮ ಜೊತೆಗೂಡಿದರು ಎಂದು ಬಸನಗೌಡ ಯತ್ನಾಳ್ ಹೇಳಿದರು. ಹೀಗೆ ಹೇಳುವ ಮೂಲಕ ಯತ್ನಾಳ್ ಬಿಜೆಪಿ ಭಿನ್ನ ನಾಯಕರಿಗೆ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿದರೇ ಎಂಬ ಅನುಮಾನ ಮೂಡದಿರದು!

ಕೊಪ್ಪಳ, ಜುಲೈ 23: ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾಗಬೇಕು, ನಾವು ಹೋರಾಟ ಮಾಡುತ್ತಿರೋದೆ ಈ ಕಾರಣಕ್ಕೆ, ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಕ್ಷದಲ್ಲಿ ವಂಶವಾದ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ, ವಿಜಯೇಂದ್ರ ಒಬ್ಬನನ್ನು ಬಿಟ್ಟು ಯಾರನ್ನೇ ರಾಜ್ಯಾಧ್ಯಕ್ಷನ ಮಾಡಿದರರೂ ಸಮಸ್ಯೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಒಡೆದ ಮನಸ್ಸುಗಳು ಒಂದಾಗಬೇಕಾದರೆ ಒಳ್ಳೆಯ ನಾಯಕತ್ವ ಬೇಕು, ನಾಯಕತ್ವವೇ ಸರಿಯಿಲ್ಲದಿದ್ದರೆ ಯಾರು ಒಂದಾಗಿ ಏನು ಪ್ರಯೋಜನ? ಯಡಿಯೂರಪ್ಪ ಮತ್ತು ವಿಜಯೇಂದ್ರ ತಾವು ರೈತನ ಮಕ್ಕಳು ಅಂತ ಹೇಳುತ್ತಾರೆ, ಹಾಗಾದರೆ ನಾವೇನು ಎಮ್ಮೆಯ ಮಕ್ಕಳೇ? ಸ್ವಗ್ರಾಮ ಯತ್ನಾಳ್ ನಲ್ಲಿ ನಮ್ಮದು ಒಕ್ಕಲುತನವಿದೆ, ನಾವು ರೈತನ ಮಕ್ಕಳು, ಯಾವತ್ತೂ ನೇಗಿಲು ಮುಟ್ಟದವರು ರೈತನ ಮಕ್ಕಳು ಹೇಗಾಗುತ್ತಾರೆ ಎಂದು ಯತ್ನಾಳ್ ಪ್ರಶ್ನಿಸಿದರು.

ಇದನ್ನೂ ಓದಿ:  ಸಿದ್ದರಾಮಯ್ಯ-ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ: ಬಸನಗೌಡ ಯತ್ನಾಳ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ